ಬೆಂಗಳೂರು: ದರೋಡೆಗೆ ಸಜ್ಜಾಗಿ ಕುಳಿತಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿಯ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿ ನಿವಾಸಿ ಪ್ರವೀಣ್ ಕುಮಾರ (27), ಅತ್ತಿಬೆಲೆ ಪಾರ್ವತಿ ನಗರದ ಸುಬ್ರಮಣಿ (26), ಮಧು (21) ಹಾಗೂ ವಿವೇಕ್ (22) ಬಂಧಿತರು. ಶಿವ ಮತ್ತು ಬೆಟ್ಟ ಹೆಸರಿನ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿ-ದ್ದಾರೆ. ಬಂಧಿತರಿಂದ 2 ದ್ವಿಚಕ್ರ ವಾಹನಗಳು ಮಾರಕಾಸ್ತ್ರಗಳು ಹಾಗೂ 4 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ನೂರು ಅಡಿ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳನ್ನು ನಿಂತುಕೊಂಡು ಒಂಟಿಯಾಗಿ ಓಡಾಡುವವರ ಅಡ್ಡಗಟ್ಟಿ ಬೆದರಿಸಿ ಹಣ ಚಿನ್ನಾಭರಣ ದೋಚಲು ಹೊಂಚು ರೂಪಿಸಿದ್ದರು. ಅಲ್ಲದೇ ಎದುರಾಳಿ ಗುಂಪಿನ ವ್ಯಕ್ತಿಯ ಮೇಲೆ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಜೈಲಿನಲ್ಲಿರುವ ರೌಡಿ ಕುಣಿಗಲ್ ಗಿರಿ ಸಹಚರರಾಗಿದ್ದು ದೇಹದಂಧೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಬೆದರಿಸಿ ಹಣ ಸುಲಿಗೆ ಮಾಡುವ ಪ್ರವೃತ್ತಿ ಹೊಂದಿದ್ದರು. ಇತ್ತೀಚೆಗೆ ಹೊಂಗಸಂದ್ರಲ್ಲಿರುವ ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಮಹಿಳೆಯನ್ನು ಬೆದರಿಸಿ ರು.1.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಮುಖ ಆರೋಪಿ ಪ್ರವೀಣ್ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು ಹೆಣ್ಣೂರು ಹಾಗೂ ಮಹದೇವಪುರದಲ್ಲಿ ದರೋಡೆ ಯತ್ನ ಹಾಗೂ ದರೋಡೆ ಪ್ರಕರಣಗಳಿವೆ. ಮತ್ತೊಬ್ಬ ಆರೋಪಿ ಮಧು ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಪ್ರಕರಣವಿದೆ. ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
Advertisement