ಮಂಗಳೂರು: ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನದಿಗಳಿಗೆ ಕಿಂಡಿ ಅಣೆಕಟ್ಟೆ ನಿರ್ಮಿಸುವ ಪಶ್ಚಿಮವಾಹಿನಿ ಯೋಜನೆಗೆ ಹಠಾತ್ತನೆ ಮರುಜೀವ ಸಿಕ್ಕಿದೆ. 15 ವರ್ಷಗಳ ಹಿಂದೆ ಈ ಯೋಜನೆ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು. ಇದೀಗ ಎತ್ತಿನಹೊಳೆ ವಿವಾದ ಕಾರಣಕ್ಕೆ ಪಶ್ಚಿಮವಾಹಿನಿ ಮಹತ್ವ ಪಡೆಯುತ್ತಿದೆ. 2000ನೇ ಇಸ್ವಿಯಲ್ಲಿ ಪ್ರಸ್ತಾಪಗೊಂಡ ಈ ಯೋಜನೆ 15 ವರ್ಷಗಳ ಬಳಿಕ ಮರುಜೀವ ಪಡೆಯುತ್ತಿದೆ. ಭವಿಷ್ಯದಲ್ಲಿಕರಾವಳಿಯಲ್ಲಿ ನೀರಿನ ಕೊರತೆಗೆ ಇತಿಶ್ರೀ ಹಾಕಲು ನದಿಗಳಿಗೆ ಸರಣಿ ಕಿಂಡಿ ಅಣೆಕಟ್ಟೆ ನಿರ್ಮಿಸಲು ಪ್ರಸ್ತಾಪಿಸಿತ್ತು. ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದಾಗ ಈ ಯೋಜನೆ ಬಗ್ಗೆ ಇಲಾಖಾ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಸುಮಾರು ರು.295 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಪ್ರಸ್ತಾಪ ಕಳುಹಿಸಿತ್ತು. ಗೋವಿಂದ ಕಾರಜೋಳ ಸಚಿವರಾಗಿದ್ದಾಗ ಇದರ ಅಂದಾಜು ಮೊತ್ತ ರು.423 ಕೋಟಿಗೆ ಏರಿಕೆಯಾಯಿತು. ಇದರಲ್ಲಿ 781 ಕಿಂಡಿ ಅಣೆಕಟ್ಟೆ ನಿರ್ಮಿಸುವ ವಿಚಾರವಿತ್ತು.