ಧಾರವಾಡ: ಸಾಹಿತಿ ಡಾ.ಎಂ.ಎಂ ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ರಾಣಿಬೆನ್ನೂರು ತಾಲೂಕು ಆರೆಮಲ್ಲಾಪುರದ ಪ್ರಣವಾನಂದ ಸ್ವಾಮೀಜಿ ಅವರನ್ನು ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಜೆ 5ರಿಂದ 7 ವರೆಗೆ ಸುಮಾರು ಎರಡು ತಾಸು ವಿಚಾರಣೆ ನಡೆಸಿದ ಎಸ್ಪಿ ಡಿ.ಸಿ ರಾಜಪ್ಪ ನೇತೃತ್ವದ ಸಿಐಡಿ ತಂಡ, ಅವರ ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಅನ್ನು ಪರಿಶೀಲನೆಗೆ ಒಳಪಡಿಸಿತು. ಬಳಿಕ ಅವುಗಳನ್ನು ಮರಳಿಸಿದ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದೆ.
ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಣಾವಾನಂದ ಸ್ವಾಮೀಜಿ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಸಿಐಡಿ ಅಧಿಕಾರಿಗಳು ವಿನಾಕಾರಣ ತಮ್ಮನ್ನು ಆಗಾಗ ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಈ ಸಲ ಆರೋಪಿಗಳ ಬಗ್ಗೆ ಏನಾದರೂ ಮಾಹಿತಿ ಇದೆಯೇ ಎಂದು ಕೇಳಿದ್ದಾರೆ. ಆದರೆ ಸ್ವಾಮೀಜಿಯಾಗಿ ತಾವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ವಿಧ್ವಂಸಕ ಕೃತ್ಯಗಳನ್ನು ನಡೆಸುವವರ ಸಂಪರ್ಕ ಇಲ್ಲ. ವಿನಾಕಾರಣ ತಮ್ಮ ಮೇಲೆ ಯಾರೋ ಆರೋಪ ಹೊರಿಸುತ್ತಿದ್ದಾರೆ. ಕಲಬುರ್ಗಿ ಅವರ ಕೊಲೆ ಬಗ್ಗೆ ತಮಗೇನು ಗೊತ್ತಿಲ್ಲವೆಂದು ತಿಳಿಸಿದ್ದೇನೆ ಎಂದರು.
Advertisement