ಮಂಡ್ಯ: ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ನಾಪತ್ತೆಯಾಗಿದ್ದಾರೆ..ದಯಮಾಡಿ ಹುಡುಕಿಕೊಡಿ ಎಂದು ಹೇಳಿ ದೂರು ದಾಖಲಿಸಲಾಗಿದೆ.
ಮಂಡ್ಯ ಎಸ್ ಪಿ ಕಚೇರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮಂಡ್ಯ ಬಿಜೆಪಿ ಮುಖಂಡ ಸಿದ್ದರಾಜು ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮತ ಹಾಕಿ ಶಾಸಕರನ್ನಾಗಿಸಿದ ಜನರನ್ನು ಅಂಬರೀಶ್ ಮರೆತಿದ್ದಾರೆ. ಜನರ ಕಷ್ಟ ಸುಖ ಆಲಿಸದೆ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕ್ಷೇತ್ರಕ್ಕೆ ಕರೆದುಕೊಂಡು ಬರುವಂತೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ನೀಡಲಾಗಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಸಂಪುಟದಿಂದ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಅಸಾಮಾಧಾನಗೊಂಡಿದ್ದ ಮಂಡ್ಯ ಶಾಸಕ ಹಾಗೂ ಮಾಜಿ ಸಚಿವ ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಳಿಂದಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇಂದು ಗೋವಾದಲ್ಲಿ ನಡೆದ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಅಂಬರೀಶ್ ಅವರು ಪಾಲ್ಗೊಂಡಿದ್ದು, ಇದರ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದಾರೆ ಎಂದು ಮಂಡ್ಯದಲ್ಲಿ ದೂರು ದಾಖಲು ಮಾಡಲಾಗಿದೆ.
Advertisement