ಟ್ರಾಫಿಕ್ ಸಮಸ್ಯೆಗೆ ಮೇಲ್ಸೇತುವೆ ನಿರ್ಮಾಣ: ಸಿದ್ದರಾಮಯ್ಯ
ಮೈಸೂರು: ಬೆಂಗಳೂರು ನಗರದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಇನ್ನು ಮೂರು ವರ್ಷಗಳವರೆಗೆ ಗಡುವು ನಿಗದಿಪಡಿಸಲಾಗಿದ್ದು, ಅಷ್ಟರೊಳಗೆ ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಮೈಸೂರಿನಲ್ಲಿ ಸುತ್ತೂರು ಮಠದ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಅತ್ಯಂತ ಕಳವಳಕಾರಿ ಸಂಗತಿ. ಅದನ್ನು ಬಗೆಹರಿಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಹೊರ ವರ್ತುಲ ರಸ್ತೆಗಳ ನಿರ್ಮಾಣ ಮತ್ತು ಸ್ಯಾಟಲೈಟ್ ಟೌನ್ ಶಿಪ್ ಗಳನ್ನು ನಿರ್ಮಿಸುವುದರಿಂದ ಟ್ರಾಫಿಕ್ ಸಮಸ್ಯೆಗಳಿಗೆ ದೊಡ್ಡ ಮಟ್ಟಿನಲ್ಲಿ ಸಹಾಯವಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ದೂರದೃಷ್ಟಿ ಯೋಜನೆ ಹಾಕಿಕೊಂಡಿದೆ ಎಂದರು.
ಮೂಢನಂಬಿಕೆಗಳಿಗೆ ನಿಷೇಧ: ಸಮಾಜದ ಒಳಿತಿನ ದೃಷ್ಟಿಯಿಂದ ಮೂಢನಂಬಿಕೆ ಪದ್ಧತಿಗಳನ್ನು ನಿಷೇಧಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸರ್ಕಾರ ಜನರ ಸಂಪ್ರದಾಯ ಆಚರಣೆಗಳ ವಿರೋಧಿಯಲ್ಲ. ಆದರೆ ಸಮಾಜದ ಜನರ ಪ್ರಗತಿಗೆ ಹಾನಿಯನ್ನುಂಟುಮಾಡುವಂಥ ಮೂಢನಂಬಿಕೆ ಆಚರಣೆಗಳನ್ನು ಖಂಡಿತಾ ಪ್ರೋತ್ಸಾಹಿಸುವುದಿಲ್ಲ. ಜಾತಿ ಪಿಡುಗಿನ ಸಮಾಜದಲ್ಲಿ ಮನುಷ್ಯರಾಗಿ ಹುಟ್ಟಿದ ನಾವು ಮನುಷ್ಯರಾಗಿ ಸತ್ತರೆ ಅದುವೇ ದೊಡ್ಡ ಸಾಧನೆ. ಸಹಿಷ್ಣುತೆಯೇ ಹಿಂದೂ ಧರ್ಮದ ಶಕ್ತಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ತಮ್ಮ ಸಂಪುಟದ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಉಪ ಚುನಾವಣೆಯಲ್ಲಿ ಜಯ ಗಳಿಸಲು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕಾಗಿ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸುತ್ತಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲವೂ ಅಧಿಕಾರದಲ್ಲಿರಲು ಈ ಬಾರಿಯ ಉಪ ಚುನಾವಣೆಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಅವರು ಸಚಿವರ ಮೂರು ತಂಡಗಳನ್ನು ರಚಿಸಿದ್ದಾರೆ. ಅವರು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಕ್ಷೇತ್ರಗಳಲ್ಲಿ ಶ್ರಮಪಟ್ಟು ಕೆಲಸ ಮಾಡುವಂತೆ ಸಚಿವರನ್ನು ಕೋರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ