ಬೆಂಗಳೂರು: ರಾಜ್ಯ ಸರ್ಕಾರ ಗ್ರಾಮ ವಿಕಾಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಪ್ರಥಮ ಕಂತಿನ ರು. 189 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಎಲ್ಲಾ 189 ಗ್ರಾಮೀಣ ವಿಧಾನ-ಸಭಾ ಕ್ಷೇತ್ರಗಳಿಗೆ ತಲಾ ಒಂದು ರು.1 ಕೋಟಿಯಂತೆ ರು. 189ಕೋಟಿಗಳನ್ನು ಈಗಾಗಲೇ ಜಿಲ್ಲಾಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಖಾತೆಗೆ ಸೇರುವಂತೆ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಎಚ್. ಕೆ.ಪಾಟೀಲ್ ಹೇಳಿದ್ದಾರೆ.
ಪ್ರತಿ ಕ್ಷೇತ್ರಕ್ಕೆ ರು.3.75 ಕೋಟಿಗಳನ್ನು ಈ ಯೋಜನೆಡಿ ಒದಗಿಸಲಾಗುತ್ತದೆ. ಈ ಅನುದಾನ ದುರ್ಬಳಕೆಯಾಗದಂತೆ ಕಠಿಣ ಕ್ರಮಕೈಗೊಳ್ಳಲಾಗಿದ್ದು, ಗ್ರಾಮ ವಿಕಾಸ ಯೋಜನೆಗೆಂದೇ ಪ್ರತ್ಯೇಕ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಈ ಯೋಜನೆಯಲ್ಲಿ ಹಿರಿಯ ರಾಜಕೀಯ ನಾಯಕರಾದ ಕೆಂಗಲ್ ಹನುಮಂತಯ್ಯ ಮತ್ತು ಗೋಪಾಲಗೌಡರಂತವರ ಹುಟ್ಟೂರುಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.
ಗ್ರಾಮ ವಿಕಾಸಕ್ಕಾಗಿ ಬಿಡುಗಡೆ ಮಾಡಲಾಗಿರುವ ಈ ಅನುದಾನದಲ್ಲಿ ಗ್ರಾಮಗಳಲ್ಲಿ ರಸ್ತೆ, ಚರಂಡಿಗಳಂತಹ ಮೂಲ ಸೌಕರ್ಯಕ್ಕೆ ಶೇ. 12, ತಿಪ್ಪೆ. ಸ್ವಚ್ಛತೆ, ಮತ್ತು ಪರಿಸರ ಸಂಬಂಧ ಕಾಮಗಾರಿಗೆ ಶೇ.10 ರಷ್ಟು ಸೌರಶಕ್ತಿ ಬಳಸಿಕೊಳ್ಳಬಹುದು. ಒಟ್ಟಾರೆ ಎಲ್ ಇಡಿ ವಿದ್ಯುತ್ ದೀಪಕ್ಕೆ ಶೇ.3, ದೇವಾಸ್ಥಾನ, ಚರ್ಚ್, ಮಸೀದಿ ಅಭಿವೃದ್ಧಿಗೆ ಶೇ.6ರಷ್ಟು ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ, ಇದಲ್ಲದೇ ಸ್ಥಳೀಯ ಸಮಸ್ಯೆಗಳಿಗೆ ಅನುಗುಣವಾಗಿ ವಿವೇಚನಾ ಕೋಟಾ ಎಂದು ಶೇ. 5 ರಷ್ಟು ಅನುದಾನವನ್ನು ಮೀಸಲಿಡಲಾಗಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಸುವರ್ಣ ಗ್ರಾಮ ಯೋಜನೆಯ ಮುಂದುವರಿದ ಭಾಗವಾಗಿ ಕಂಡರೂ ಈ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಿವೆ. ಆ ಯೋಜನೆಯಲ್ಲಿ ಇದ್ದಂತೆ ಸಮಸ್ಯೆಗಳನ್ನು ನಿವಾರಿಸಿ ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಅನೇಕ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.
ಈ ಯೋಜನೆ ಜಾರಿ ಮಾಡುತ್ತಿರುವುದು ವಿಳಂಬವಾಗಿರಬಹುದು. ಆದರೆ ಇದರ ಹಿಂದೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಉದ್ದೇಶಲ್ಲ. ಯೋಜನೆಗೆ ಅಗತ್ಯ ಸಿದ್ಧತೆ ಮತ್ತು ಅನುಷ್ಠಾನಕ್ಕೆ ಇರುವ ಅಡಚಣೆಗಳನ್ನು ನಿವಾರಿಸುವುದು ಕೊಂಚ ತಡವಾಗಿದೆ. ಗ್ರಾಮೀಣಾಭಿವೃದ್ಧಿಯ ಇಲಾಖೆ ಸೇವೆಗಳನ್ನು ಒದಗಿಸಲು ಬಳಸಲಾಗುತ್ತಿದ್ದ ಸೇವೆಗಳನ್ನು ಇನ್ನಷ್ಟು ಹೆಚ್ಚಿಸಲಾಗಿದ್ದು, ಸದ್ಯದಲ್ಲೇ 43 ಸೇವೆಗಳನ್ನು ಆನ್ಲೈನ್ ಮೂಲಕ ನೀಡಲಾಗುತ್ತದೆ. ಇದರಿಂದ ತೆರಿಗೆ ಪಾವತಿ, ಪ್ರಮಾಣ ಪತ್ರಗಳ ಸ್ವೀಕರಿ ಸೇರಿದಂತೆ ಅನೇಕ ಸೇವೆಗಳನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
Advertisement