ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನ ಈಗ ಹಾಸನ ಜಿಲ್ಲಾ ರಾಜಕೀಯದಲ್ಲಿ ಹಾಲಾಹಲ ಸೃಷ್ಟಿಸುವಂತೆ ಗೋಚರವಾಗುತ್ತಿದೆ.
ಇತ್ತ ಹಾಲಿನ ದರ ಏರಿಕೆ ಪ್ರಸ್ತಾಪ ಪ್ರಕಟವಾಗುತ್ತಿದ್ದಂತೆ ಕೆಎಂಎಫ್ ಮಾಜಿ ಅಧ್ಯಕ್ಷ ಎಚ್.ಡಿ ರೇವಣ್ಣ ಮತ್ತು ಪಶು ಸಂಗೋಪನಾ ಸಚಿವ ಎ. ಮಂಜು ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಬೆಂಗಳೂರಿನ ಜನತೆ ಹಾಲು ನೀಡಲು ಸಿದ್ಧ ಎಂದಿದ್ದ ರೇವಣ್ಣ ಹೇಳಿಕೆಗೆ ಸಿಚವ ಮಂಜು ಪ್ರತಿಕ್ರಿಯಿಸಿ ಕೆಎಂಎಫ್ ವಹಿಸಿಕೊಂಡು ಅವರೇ ಕಮಿಷನ್ ಪಡೆಯಲಿ ಎಂದು ಸವಾಲು ಹಾಕಿದ್ದರು. ಇವರ ಮಾತಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ರೇವಣ್ಣ ಸರ್ಕಾರಕ್ಕೆ ಕೆಎಂಎಫ್ ನಡೆಸಲು ಆಗದಿದ್ದರೇ ಹಾಸಲ ಹಾಲು ಒಕ್ಕೂಟಕ್ಕೆ ಬಿಟ್ಟು ಕೊಡಲಿ ಎಂದು ಸವಾಲು ಸ್ವೀಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ ಹಾಸನ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 8.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಸ್ಥಳೀಯವಾಗಿ 1.50 ಲಕ್ಷ ಲೀಟರ್, ಹಾಲು ಮದರ್ ಡೇರಿಗೆ 1 ಲಕ್ಷ ಲೀಟರ, ಮಂಗಳೂರಿಗೆ 50 ಸಾವಿರ ಲೀಟರ್ ಹಾಲು ಪೂರೈಸುತ್ತಿದ್ದೇವೆ. ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತದೆ. ಹೈದರಾಬಾದ್ ಗೆ ರು.20 ಕ್ಕೆ ಹಾಲು ನೀಡುತ್ತಿದ್ದೇವೆ. ಸರ್ಕಾರ ಅವಕಾಶ ಕೊಟ್ಟರೆ ಬೆಂಗಳೂರಿಗೆ. ರು30 ಕ್ಕೆ ಮಾರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ಜಿಲ್ಲೆಯಿಂದ ಬೆಂಗಳೂರು ಸೇವೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
Advertisement