ಬೆಂಗಳೂರು: ದೇಶದಲ್ಲಿರುವ 4900 ಅಣೆಕಟ್ಟುಗಳ ಸುರಕ್ಷತೆ ಸಂಬಂಧ ಕೇಂದ್ರ ಜಲ ಆಯೋಗವು ವಿಶ್ವಬ್ಯಾಂಕಿನ ನೆರವಿನೊಂದಿಗೆ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯನ್ನು (ಡ್ರಿಪ್) ಜಾರಿಗೆ ತಂದಿದ್ದು, ಈ ಯೋಜನೆ ಅನುಷ್ಠಾನದ ಎರಡನೇ ರಾಷ್ಟ್ರೀಯ ಸಮ್ಮೇಳನವು ಬೆಂಗಳೂರಿನಲ್ಲಿ ಆರಂಭವಾಯಿತು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭವಾದ ಎರಡು ದಿನಗಳ ಸಮ್ಮೇಳನಕ್ಕೆ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಚಾಲನೆ ನೀಡಿದರು. ಮೊದಲನೇ ಸಮ್ಮೇಳನವನ್ನು ಚೆನ್ನೈ ನಲ್ಲಿ ಆಯೋಜಿಸಿ ಹಲವು ನಿರ್ಣಯ ತೆಗೆದುಕೊಂಡಿದ್ದ ಜಲ ಆಯೋಗ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಎರಡನೇ ಸಮ್ಮೇಳನವನ್ನು ಆಯೋಜಿಸಿದೆ.
ಈ ಸಮ್ಮೇಳನದಲ್ಲಿ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನ ಬಳಕೆ ಅಣೆಕಟ್ಟು ನಿರ್ವಹಣೆ ಮತ್ತು ಸುರಕ್ಷತೆಯಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿಗಳ ಜ್ಞಾನವನ್ನು ಒರೆಗೆ ಹಚ್ಚುವುದು ಪ್ರಮುಖ ಉದ್ದೇಶವಾಗಿದೆ.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಘನಶ್ಯಾಂ ಝಾ ಮಾತನಾಡಿ ದೇಶದ ಶೇ.80 ರಷ್ಟು ಅಣೆಕಟ್ಟುಗಳು 25 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದು, ಮಾನವ ಜೀವ, ಆಸ್ತಿ- ಪಾಸ್ತಿ ಮತ್ತು ಪರಿಸರ ಕಾಪಾಡುವ ದೃಷ್ಟಿಯಿಂದ ಈ ಅಣೆಕಟ್ಟುಗಳ ಸುರಕ್ಷತೆ ಬಹಳ ಪ್ರಮುಖವಾಗಿರುತ್ತದೆ. ಇದಕ್ಕಾಗಿ ವಿಶ್ವಬ್ಯಾಂಕ್ 2100 ಕೋಟಿ ನೆರವು ನೀಡಿದೆ. ಈ ಯೋಜನೆಯಡಿ ಮಧ್ಯಪ್ರದೇಶ, ಒಡಿಶಾ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 250 ಬೃಹತ್ ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕ ಡ್ರಿಪ್ ಎನ್ನುವ ವಿಶೇಷ ಯೋಜನೆಯಡಿ 27 ಬೃಹತ್ ಅಣೆಕಟ್ಟುಗಳನ್ನು ಅಭಿವೃದ್ಧಿಗೊಳಿಸಲು ಬಹಳಷ್ಟು ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.
Advertisement