ಬೆಂಗಳೂರು: ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸಿಹೋಗುತ್ತಿದ್ದು, ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ಉತ್ತಮ ಪರಿಸರಕ್ಕಾಗಿ ಶಾಂತಿ, ಪ್ರೀತಿ-ಪ್ರೇಮದ ಗುಣಗಳ ಬೆಲೆ ಅರಿಯಬೇಕು ಎಂದು ಕ್ರೈಸ್ತ ಧರ್ಮಗುರು ಬರ್ನಾಡ್ ಮೋರಸ್ ತಿಳಿಸಿದರು.
ನಗರದ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯ 110ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾಸಂಸ್ಥೆಗಳು ಜಾತಿ, ಮತ, ಧರ್ಮ ಬೋಧಿಸದೆ ಅಜ್ಞಾನದಿಂದ ಜ್ಞಾನದತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯಬೇಕಿದೆ. ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕಾಗಿ ಸಂಘಟಿತವಾಗುವ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಿ ಎಂದರು.
ವಿದ್ಯಾ ಸಂಸ್ಥೆಗಳು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ವಿದ್ಯೆ ನೀಡಬೇಕು. ವಿದ್ಯಾದಾನದ ಮೂಲಕ ಸಮಗ್ರ ಮತ್ತು ಶಕ್ತಿಯುತ ಭಾರತ ನಿರ್ಮಾಣಕ್ಕೆ ಯುವ ಜನತೆಯನ್ನು ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳ ಮೇಲಿದೆ ಎಂದು ಹೇಳಿದರು. ಕಳೆದ 110 ವರ್ಷಗಳಿಂದಲೂ ಸರ್ವಧರ್ಮದವರಿಗೂ ಶಿಕ್ಷಣ ನೀಡುತ್ತಿರುವ ಸಂಸ್ಥೆಯಿಂದ ರಾಜಕೀಯ, ಕ್ರೀಡೆ, ಸಂಗೀತ ಸೇರಿದಂತೆ ಹಲವಾರು ಕ್ಷೇತ್ರಗಳ ಸಾಧಕರನ್ನು ಸಂಸ್ಥೆ ನೀಡಿದೆ. ಮುಂದೆಯೂ ಹೀಗೆ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಮಾಜಿ ಸಚಿವ, ಸಂಸ್ಥೆಯ ಹಳೆ ವಿದ್ಯಾರ್ಥಿ ಕುಮಾರ್ ಬಂಗಾರಪ್ಪ ಮಾತನಾಡಿ, ಮಾತೃಭಾಷೆ ಬಿಟ್ಟು, ಉಳಿದ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಮಾತೃಭಾಷೆಯ ಆತ್ಮೀಯತೆ
ಬೆಳೆಯುವುದಿಲ್ಲ ಎಂದರು. ಜೀವನದಲ್ಲಿ ತಂದೆ-ತಾಯಿ ಮತ್ತು ಗುರುಗಳ ಮಾತು ನಮ್ಮ ಒಳ್ಳೆಯದಕ್ಕೇ, ಯಶಸ್ಸಿಗೆ ಆಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಕೆಟ್ಟ
ಚಟಕ್ಕೆ ಬೀಳದೆ ಉತ್ತಮ ಭವಿಷ್ಯ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಎನ್.ಎ.ಹ್ಯಾರೀಸ್ ಮಾತನಾಡಿ, ಸಮಾಜದಲ್ಲಿ ಕೋಮುವಾದ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಜಾತಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ವಿದ್ಯಾವಂತರಾಗಿ ಜೀವನ ರೂಪಿಸಿಕೊಳ್ಳಿ, ಭಾರತೀಯರಾಗಿ ಹೆಮ್ಮೆ ಪಡುವ ಕಾರ್ಯಕ್ಕೆ ಯುವಜನತೆ ಮುಂದಾಗಲಿ. ಸರ್ವರಿಗೂ ನ್ಯಾಯ ಒದಗಿಸಿರುವ ಸಂವಿಧಾನವನ್ನು ಗೌರವಿಸೋಣ ಎಂದರು.
Advertisement