ಬೆಂಗಳೂರು: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿಶೇಷ ಘಟಕ ಯೋಜನೆ ಅನುದಾನ ವೆಚ್ಚ ಮಾಡಿ ಪ್ರಗತಿ ಸಾಧಿಸದ ಅಧಿಕಾರಿಗಳಿಗೆ ಶಿಕ್ಷೆ ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್ಸಿಎಸ್ಪಿ-ಟಿಎಸ್ಪಿ ಅನುದಾನದ ಸದ್ಬಳಕೆ ಮಾಡಿಕೊಳ್ಳದೆ, ವೆಚ್ಚ ಮಾಡದೆ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾನೂನೇ ಹೇಳುತ್ತದೆ. ಆದ್ದರಿಂದ ಇದರಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರದ ವಿಶೇಷ ಘಟಕ ಯೋಜನೆಯಲ್ಲಿ ಮೀಸಲಿಟ್ಟಿರುವ ಎಸ್ಇಪಿ ಮತ್ತು ಟಿಎಸ್ಪಿ ಅನುದಾನದ ವೆಚ್ಚ ಮತ್ತು ಪ್ರಗತಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳ ಮೇಲೆ ಎರ್ರಾಬಿರ್ರಿ ರೇಗಿದರು.
ಸಚಿವರಾದ ಎಚ್. ಆಂಜನೇಯ, ಎಚ್. ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಟಿ.ಪಿ.ಪರಮೇಶ್ವರ್-ನಾಯಕ್, ಸಂಸದರಾದ ಧ್ರುವನಾರಾಯಣ್, ಡಿ.ಚಂದ್ರಪ್ಪ, ಮಾಜಿ ಸಚಿವ ಗೋಂದ ಕಾರಜೋಳ ಹಾಗೂ ಎಲ್ಲಾ ಇಲಾಖೆಗಳ ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು.
ಮುಖ್ಯಮಂತ್ರಿ ಅವರು ಮೊದಲು ವಿಶೇಷ ಘಟಕ ಯೋಜನೆಯಡಿ ವೆಚ್ಚವಾಗಿರುವ ವಿವರಗಳನ್ನು ಪ್ರತಿ ಇಲಾಖೆಗಳಿಂದ ಪಡೆದರು. ನಂತರ ಡಿಸೆಂಬರ್ ಅಂತ್ಯದ ವರೆಗೂ ಶೇ.40ರಷ್ಟು ಮಾತ್ರ ವೆಚ್ಚವಾಗಿದೆ ಎನ್ನುವ ವಿಚಾರ ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು, ಗ್ರಾಪಂ ಚುನಾವಣೆ, ಅದರ ಬೆನ್ನಲ್ಲೇ ಪರಿಷತ್ ಚುನಾವಣೆ ಎದುರಾಗಿದ್ದರಿಂದ ನೀತಿ ಸಂತೆ ಜಾರಿಯಾಗಿ ಅನುದಾನ ವೆಚ್ಚ ಮಾಡಲು ತೊಂದರೆಯಾಗಿದೆ. ಅದರ ಜತೆಗೆ ವಸತಿ ಮತ್ತು ಸೌಲಭ್ಯಗಳ ಹಂಚಿಕೆಗೆ ಸಮಿತಿಗಳು ರಚನೆಯಾಗದೆ ಫಲಾನು-ಭಗಳ ಆಯ್ಕೆಯಲ್ಲಿ ವಿಳಂಬವಾಗಿ ಅನುದಾನ ಖರ್ಚಾಗಿಲ್ಲ ಎಂದು ಸಮಜಾಯಿಶಿ ನೀಡಿದರು.
ಇದನ್ನು ಒಪ್ಪದ ಮುಖ್ಯಮಂತ್ರಿ ಅವರು, ಕಾರಣ ಹೇಳುವುದನ್ನು ಬಿಟ್ಟು ಇರುವ ಅನುದಾನ-ವನ್ನು ಏಪ್ರಿಲ್ ಒಳಗಾಗಿ ಸದ್ಬಳಕೆ ಮಾಡಿ, ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಡಿಮೆ ವೆಚ್ಚ ಮಾಡಿರುವ ಎಲ್ಲಾ ಇಲಾಖೆ-ಗಳ ಮುಖ್ಯಸ್ಥರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ-ದ್ದೇನೆ. ಉಳಿಕೆ ಅನುದಾನವನ್ನು ಮಾರ್ಚ್ ಒಳಗೆ ವೆಚ್ಚ ಮಾಡುವಂತೆ ಸೂಚಿಸಿದ್ದೇನೆ. ಅದನ್ನು ಮೀರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದರು.
ದೌರ್ಜನ್ಯ ತಡೆಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ : ಪರಿಶಿಷ್ಟಜಾತಿ, ವರ್ಗದ ಜನರ ಮೇಲಿನ ದೌರ್ಜನ್ಯ ಕುರಿತ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಚಿವ ಸಭೆಯನ್ನು 7 ವರ್ಷಗಳ ನಂತರ ನಡೆಸಿದ ಮುಖ್ಯಮಂತ್ರಿ ಅವರು ದೌರ್ಜನ್ಯ ತಡೆಯಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಮುಖ್ಯಮಂತ್ರಿ ಅವರ ಕ್ರಮಕ್ಕೆ ಮೆಚ್ಚಿಗೆಯನ್ನೂ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಕಾಯ್ದೆಯಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವುದಕ್ಕೆ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತನಿಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು.
ಸಾಕ್ಷಿಗಳನ್ನು ಸರಿಯಾಗಿ ಸಿದ್ಧಪಡಿಸಿ ಅವರು ತಪ್ಪಿತಸ್ಥರ ವಿರುದ್ಧ ಸಾಕ್ಷ್ಯ ಹೇಳು-ವಂತೆ ಮಾಡಬೇಕು. ಶಿಕ್ಷೆ ಪ್ರಮಾಣ ಹೆಚ್ಚಿಸಬೇಕು. ಒಟ್ಟಾರೆ ದೌರ್ಜನ್ಯ ಕಡಿಮೆಯಾಗುವಂತೆ ಮಾಡಬೇಕೆಂದು ಸೂಚಿಸಿದ್ದೇನೆ. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಹೆಚ್ಚುವರಿ ಆಡ್ವೋ-ಕೇಟ್ ಜನರಲ್ ಇರಬೇಕು ಎಂದು ಕೇಳಿದ್ದಾರೆ. ಅದರಂತೆ ಆಡ್ವೋಕೇಟ್ ಜನರಲ್ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಸ್ ಮತ್ತೆ ಲೇಟ್!
ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಎಸ್ಸಿಎಸ್ಪಿ-ಟಿಎಸ್ಪಿ ಸಭೆಗೂ ಕೆಲಕಾಲ ತಡವಾಗಿ ಬಂದರು. ಕೆಲ ದಿನಗಳ ಹಿಂದೆ ವಿಧಾನಸೌಧಕ್ಕೆ ಸಂಸದೀಯ ಸಮಿತಿ ಆಗಮಿಸಿದ್ದಾಗ ತಡವಾಗಿ ಸಭೆಗೆ ತಡವಾಗಿ ಬಂದು ಎಡವಟ್ಟು ಮಾಡಿಕೊಂಡಿದ್ದ ಜಾದವ್ ಅವರು ಮಾಧ್ಯಮದವರನ್ನು ಕಂಡು ಓಡಿ ಹೋಗಿದ್ದರು.
ಆನಂತರ ಅವರು ಎಲ್ಲಾ ಸಭೆಗಳಿಗೂ ಮುಂಚಿತವಾಗಿಯೇ ಹೋಗುತಿದ್ದರು. ಆದರೆ ಏಕೋ ಏನೋ ಮುಖ್ಯಮಂತ್ರಿ ನೇತೃತ್ವದ ಎಸ್ಸಿಎಸ್ ಪಿ-ಟಿಎಸ್ಪಿ ಸಭೆಗೆ 10 ನಿಮಿಷ ತಡವಾಗಿ ಆಗಮಿಸಿ ಗಾಬರಿ ಗೊಂಡಿದ್ದರು.