ಬೆಂಗಳೂರು: ದೇಶದ ಪಾರಂಪಾರಿಕ ತಳಿಗಳಲ್ಲಿ ಉತ್ಕೃಷ್ಟ ಗುಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಎನ್ಡಿಆರ್ಐ ಕ್ಯಾಂಪಸ್ ನ ಪ್ರಾಂಶುಪಾಲ ಹಾಗೂ ಸಂಶೋಧಕ ಡಾ.ಕೆ.ಪಿ.ರಮೇಶ್ ಹೇಳಿದರು.
ಶ್ರೀ ಭಾರತೀ ವಿದ್ಯಾಲಯದಲ್ಲಿ ಕಾಮದುಘಾ ಗೋಮಹೋತ್ಸವ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ `ದೇಶೀ ಗೋತಳಿಗಳ ವಿವಿಧ ಆಯಾಮಗಳು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮನುಷ್ಯ ಆರೋಗ್ಯ ಪೂರ್ಣನಾಗಿ ದೃಢತೆಯಿಂದ ಬದುಕಲು ಬಪೇಕಾಗುವಷ್ಟು ನಮ್ಮಲ್ಲಿ ಸಂಪತ್ತಿದೆ. ಆದರೆ, ಆದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ದೇಶಿ ತಳಿಗಳ ಹಾಲಿನಲ್ಲಿ ವಿಶಿಷ್ಟ ಗುಣಗಳಿದ್ದು, ಅವುಗಳಿಂದ ನಶಿಸಿ ಹೋಗುತ್ತಿರುವು ದುರಂತ ಎಂದರು.
ದೇಶದಲ್ಲಿ ಶೇ.80ರಷ್ಟು ದೇಶಿ ತಳಿಗಳು ಎಲ್ಲಾ ಋತುಗಳಿಗೂ ಹೊಂದಿಕೊಳ್ಳುತ್ತವೆ. ಉಷ್ಣತೆ ತಡೆದುಕೊಂಡು ಬದುಕುವ ರೀತಿ ಪಚನ ಕ್ರಿಯೆ ಸಾಮರ್ಥ್ಯ ಹೊಂದಿವೆ. ಆದರೆ, ವಿದೇಶಿ ತಳಿಗಳು ಆ ರೀತಿಯ ಗುಣಗಳನ್ನು ಹೊಂದಿಲ್ಲ. ಹಾಗೇ ವಿದೇಶಿ ತಳಿಗಳಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಪ್ರೊಟೀನ್ ಅಂಶಗಳು ದೇಶಿ ತಳಿಗಳಲ್ಲಿವೆ ಎಂದು ತಿಳಿಸಿದರು.
ಆಯುರ್ವೇದಿಕ್ ಕಾಲೇಜಿನ ಡಾ.ಬಿ.ಆರ್.ರಾಮಕೃಷ್ಣ ಮಾತನಾಡಿ, ಗೋಮೂತ್ರವು ಜ್ವರ ಮತ್ತು ಕ್ಯಾನ್ಸರ್ ಗುಣಪಡಿಸುತ್ತದೆ. ಮನಸ್ಸಿಗೆ ಸಂಬಂಧಪಟ್ಟ ವ್ಯಾಧಿಗಳಿಗೆ ಪಂಚಗವ್ಯ ರೋಗ ನಿರೋಧಕರವಾಗಿ ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿನ ವಿಷ ಪದಾರ್ಥಗಳನ್ನು ಹೊರ ಚೆಲ್ಲುವ ಶಕ್ತಿ ಗೋಮೂತ್ರಕ್ಕಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಯುತ್ತಿದೆ ನಮ್ಮಲ್ಲೂ ವೈಜ್ಞಾನಿಕ ಮಟ್ಟದಲ್ಲಿ ಸಂಶೋಧನೆ ನಡೆದು ಪ್ರಾಮಾಣೀಕರಿಸಬೇಕು ಎಂದರು.
ಡಾ.ಕೆ.ವಿಶ್ವನಾಥ್ ಭಟ್ `ಕೃಷಿಯಲ್ಲಿ ಭಾರತೀಯ ತಳಿಗಳು' ಎಂಬ ವಿಷಯ ಕುರಿತು ಮಾತನಾಡಿ, ದೇಶದಲ್ಲಿ 70 ಜಾತಿಯ ರಾಸುಗಳಿದ್ದು, 36 ತಳಿಗಳು ಮಾತ್ರ ಉಳಿದಿವೆ. ತಳಿಗಳ ಅಭಿವೃದ್ಧಿಗೆ ಉತ್ತಮ ವಾತಾವರಣ, ಅರಣ್ಯ ಸಂಪತ್ತು, ಪ್ರಾಣಿ ಸಂಪತ್ತು ಅತ್ಯಗತ್ಯ. ಮಣ್ಣಿನ ಫಲವತ್ತತೆಯನ್ನು ಯಾರೂ ಪರಿಗಣಿಸದಿರುವುದು ದುರದೃಷ್ಟಕರ, ಇಂದು ಸರಿಯಾದ ಪ್ರಮಾಣದಲ್ಲಿ ನೀರಿನ ಹಿಂಗುವಿಕೆಗೆ ಆಸ್ಪದ ಕೊಡುತ್ತಿಲ್ಲ. ಇದರಿಂದ ಅಂತರ್ಜಲ ಮರೆಯಾಗುತ್ತಿದೆ ಎಂದರು.
ಯೋಗ ಗುರು ಡಾ.ಕೆ.ಎನ್.ಶಂಕರನಾರಾಯಣ ಜೋಯಿಷ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವಿಚಾರವನ್ನು ಸಂಪೂರ್ಣವಾಗಿ ಪರಿಶೀಲಿಸಿಯೇ ಹೊರ ಜಗತ್ತಿಗೆ ಪರಿಚಯಿಸಬೇಕು. ಪಂಚಗವ್ಯವನ್ನು ದಿನನಿತ್ಯ ಬಳಸಿದರೆ ಆರೋಗ್ಯಕ್ಕೆ ಅಪಾಯಕಾರಿ.
ಜಪ, ಪೂಜೆ, ಏಕಾಂತ ವಾಸ ಅನುಭವಿಸುವ ಜನರಗೆ ತುಪ್ಪ, ಮೊಸರು ಅಗತ್ಯವಾದ ಆಹಾರವೆಂದು ಹಿರೀಕರು ಹೇಳಿದ್ದರು. ಇಂದು ಚಟುವಟಿಕೆರಹಿತ ಜೀವನ ನಡೆಸುವುದರಿಂದ ಇವುಗಳು ಸಲ್ಲದು ಎಂದು ಸಂಶೋಧನೆ ತಿಳಿಸಿದೆ ಎಂದರು. ಡಾ.ಶಿವರಾಮ್ ಭಟ್, ಡಾ.ವಿಶ್ವನಾಥ್ ಇದ್ದರು.
ಗೋವುಗಳ ಜತೆ ಚಿಣ್ಣರ ಸಂಕ್ರಾಂತಿ
ಶೃಂಗರಿಸಿಕೊಂಡ ಎತ್ತಿನ ಗಾಡಿಯಲ್ಲಿ ಕುಳಿತ ಪುಟ್ಟ ಮಕ್ಕಳ ನಗುವಿನ ಅಲೆ ಎತ್ತುಗಳಿಗೆ ನೇತು ಹಾಕಿದ ಗಂಟೆಯ ನಾದದ ಜೊತೆ ಮಾರ್ದನಿಸುತ್ತಿತ್ತು... ಮಕರ ಸಂಕ್ರಾಂತಿಯ ಘಮಲು ಎಲ್ಲೆಡೆ ಪಸರಿಸಿ.....ಸುಗ್ಗಿಯ ನೆನಪಿಸುತ್ತಿದ್ದರೆ, ಅಪರೂಪದ ವಿವಿಧ ದೇಸಿ ತಳಿ ರಾಸುಗಳನ್ನು ನೋಡಿ, ಕರುಗಳ ಜೊತೆ ಆಟದ ಭಾಗ್ಯ ಇನ್ನೊಂದು ಕಡೆ.
ಇದು ಕಂಡುಬಂದದ್ದು ಶ್ರೀರಾಮಚಂದ್ರಾಪುರಮಠ ಶ್ರೀ ಭಾರತೀ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಮದುಘಾ ಗೋಮಹೋತ್ವವದಲ್ಲಿ, ಸಿಮೆಂಟ್ ಕಟ್ಟಡಗಳ ಗೋಜಿನಲ್ಲಿ ಕಳೆದು ಹೋದ ಮಕ್ಕಳು, ಪೋಷಕರಿಗೆ ಮಕರ ಸಂಕ್ರಾಂತಿ ಹಬ್ಬದ ಜೊತೆಗೆ ಗ್ರಾಮೀಣ ಸೊಗಡನ್ನು ಸವಿಯುವ ಸದಾವಕಾಶ ಇಲ್ಲಿತ್ತು.
ನಶಿಸುತ್ತಿರುವ ಪಾರಂಪರಿಕ ಗೋತಳಿಗಳ ಮೈಮುಟ್ಟಿ ಅವುಗಳನ್ನು ತಮ್ಮ ಫೋನಿನಲ್ಲಿ ಸೆರೆ ಹಿಡಿಯುವ ತವಕ ಎಲ್ಲರಲ್ಲಿತ್ತು. ಇದರೊಂದಿಗೆ ವಿವಿಧ ಸಂಸ್ಥೆಗಳ ಗವ್ಯಾಧಾರಿತ ಉತ್ಪನ್ನಗಳನ್ನು ಖರೀದಿಸುವ ಭರಾಟೆ ಬೇರೆ. ಗೋ ಮಹೋತ್ವವದಲ್ಲಿ ಕಿಲ್ಲಾರಿ, ಮಲೆನಾಡ ಗಿಡ್ಡ, ಅಂಬಾಚೆರಿ, ಕಾಸರಗೋಡು, ಜವಾರಿ, ಗಿರ್, ಹಳ್ಳಿಕಾರ್ ನಂತಹ ವಿವಿಧ ಪಾರಂಪರಿಕ ಗೋತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
Advertisement