ಆಂಬ್ಯುಲೆನ್ಸ್ ಸಿಬ್ಬಂದಿಗೆ ಆರೋಗ್ಯ ಸಚಿವರ ಎಚ್ಚರಿಕೆ
ಬೆಂಗಳೂರು: ಆರೋಗ್ಯ ಕವಚ 108 ಆಂಬ್ಯುಲೆನ್ಸ್ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಇಎಂಟಿ ಮತ್ತು ಪೈಲಟ್ ನೌಕರರು ಸರ್ಕಾರದ ಬೇಡಿಕೆ ಬಯಸುವ ಮುನ್ನ ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಎಂಟಿ ಮತ್ತು ಪೈಲಟ್ ನೌಕರರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯಿದೆ ರೀತಿ ವೇತನ ಬಡ್ತಿ ನೀಡಲು ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರೂ ಸಹ ಕೆಳಹಂತದ ಸಿಬ್ಬಂದಿಯನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಮಾಡುವ ಕೆಲಸವನ್ನು ಸರಿಯಾಗಿ ಮಾಡದಿದ್ದರೂ ಅನ್ಯರ ಮಾತು ಕೇಳಿ ಳಾಗುತ್ತಿರುವ ನೌಕರರು ಶಿಸ್ತು ರೂಢಿಸಿಕೊಳ್ಳ ಬೇಕು. ಇಂತಹವರ ಮೇಲೆ ಆಂಬುಲೆನ್ಸ್ ಉಸ್ತುವಾರಿ ವಹಿಸಿಕೊಂಡಿರುವ ಜಿವಿಕೆ ಕಂಪನಿಯು ಸಂಬಂಧಪಟ್ಟವರ ಮೇಲೆ ಕ್ರಮ ಗೆದುಕೊಳ್ಳಬೇಕು. ಆ ಭರವಸೆ ಸಿಗುವವರೆಗೂ ವೇತನ ಬಡ್ತಿಯ ಆದೇಶವನ್ನು ಕೆಲಕಾಲ ತಡೆ ಹಿಡಿಯುವುದಾಗಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಆರೋಗ್ಯ ಸೇವೆಯಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಹಾಗೊಂದು ವೇಳೆ ಪೈಲಟ್ಗಳು ಆಂಬ್ಯುಲೆನ್ಸ್ ನಿಲ್ಲಿಸುವುದಾದರೆ ಎಸ್ಮಾ ಜಾರಿ ಮಾಡಿ ಕೆಎಸ್ಸಾರ್ಟಿಸಿ ಚಾಲಕರನ್ನು ಬಳಸಿಕೊಂಡು ಆಂಬ್ಯುಲೆನ್ಸ್ ಓಡಿಸಿ ಸಾರ್ವಜನಿಕರ ಸೇವೆ ಮಾಡಲಾಗುವುದು. ಬೇರೆ ಸಂಸ್ಥೆಗೆ ಆಹ್ವಾನ ನೀಡಿ ಗುತ್ತಿಗೆ ಬದಲಾಯಿಸಲಾಗುವುದು.
●ಯು ಟಿ ಖಾದರ್ ಆರೋಗ್ಯ ಸಚಿವರು
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ