- ಚಂದ್ರು ಅಂಬಿಗೇರ
ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಸ್ಕೇಟಿಂಗ್ ಮೈದಾನ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮೈದಾನದಲ್ಲಿ ನೀರು ತುಂಬಿರುವುದರಿಂದ ಆಸಕ್ತರು ಸ್ಕೇಟಿಂಗ್ ತರಬೇತಿ ಪಡೆಯಲು ಹಿಂಜರಿಯುತ್ತಾರೆ.
ಬೇಸಗೆ ಬಿಡುವಿನಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಮೊದಲಿದ್ದ ಬಾಸ್ಕೆಟ್ ಬಾಲ್ ಮೈದಾನವನ್ನು ತೆರವುಗೊಳಿಸಿ ಅಲ್ಲಿ ರು. 12 ಲಕ್ಷ ವೆಚ್ಚದಲ್ಲಿ ಸ್ಕೇಟಿಂಗ್ ಮೈದಾನ ನಿರ್ಮಿಸಿದ್ದರು. ಮೈದಾನಕ್ಕೆ ಕ್ರೀಡಾ ಇಲಾಖೆ ರು. 7 ಲಕ್ಷ ಮತ್ತು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರು. 5 ಲಕ್ಷ ನೀಡಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯವಾಗಿ ಸ್ಕೇಟಿಂಗ್ ಮೈದಾನ ಸಮತಟ್ಟಾಗಿರಬೇಕು. ಆದರೆ, ಇದು ಸಮತಟ್ಟಾಗಿಲ್ಲ. ಹಾಗಾಗಿ ಇಲ್ಲಿ ನೀರು ನಿಂತಿರುತ್ತದೆ. ನೀರು ನಿಂತರೆ ಸ್ಕೇಟಿಂಗ್ ತರಬೇತಿಗೆ ಅನುಕೂಲವಲ್ಲ ಎನ್ನುತ್ತಾರೆ ಸ್ಕೇಟಿಂಗ್ ಪಟುಗಳು. ಸ್ಕೇಟಿಂಗ್ ಕಲಿಯುವವರಿಗೆ ತರಬೇತಿ ನೀಡಲೆಂದು ಬೆಳಗಾವಿಯಿಂದ ಕೋಚ್ ಒಬ್ಬರು ನಿತ್ಯ ಇಲ್ಲಿಗೆ ಬರುತ್ತಾರೆ. ಆದರೆ, ಮೈದಾನದಲ್ಲಿ ನೀರು ತುಂಬಿರುವುದರಿಂದ ತರಬೇತಿ ನೀಡುವ ಬದಲು ನಿತ್ಯ ಮೈದಾನದಲ್ಲಿ ತುಂಬಿದ್ದ ನೀರನ್ನು ಬಳಿದು ಮತ್ತೆ ಮರಳುತ್ತಾರೆ.
ಈ ಕುರಿತು 'ಕನ್ನಡಪ್ರಭ' ಸ್ಕೇಟಿಂಗ್ ತರಬೇತುದಾರ ಶ್ರೀನಿವಾಸ ಅವರನ್ನು ಸಂಪರ್ಕಿಸಿದಾಗ, ಮೈದಾನ ಕಾಮಗಾರಿ ಸರಿಯಾಗಿಲ್ಲ. ಮೈದಾನದಲ್ಲಿ ಇಳಿಜಾರೂ ಇಲ್ಲ. ಸಮತಟ್ಟಾಗಿಯೂ ಇಲ್ಲ. ನೀರು ಹರಿದು ಹೋಗಲೆಂದು ಚಿಕ್ಕ ಜಾಗ ಮಾಡಲಾಗಿದ್ದು, ಅಲ್ಲಿಂದ ನೀರು ಹೊರಹೋಗದೆ ಮೈದಾನದಲ್ಲೇ ನಿಂತಿರುತ್ತದೆ. ನೀರಿರುವಾಗ ಸ್ಕೇಟಿಂಗ್ ಪ್ರ್ಯಾಕ್ಟಿಸ್ ಮಾಡಿದರೆ ಜಾರಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪ್ರತಿಕ್ರಿಯಿಸಿದರು.
Advertisement