ಲವ್ ಜಿಹಾದ್ ಹೆಸರಿನಲ್ಲಿ ಪತ್ನಿ, ಪುತ್ರನ ಮತಾಂತರಕ್ಕೆ ಯತ್ನ

Updated on

ಬಾಗಲಕೋಟೆ: ಲವ್ ಜಿಹಾದ್ ಹೆಸರಿನಲ್ಲಿ ಪತ್ನಿ ಹಾಗೂ ಪುತ್ರನ ಮತಾಂತರಕ್ಕೆ ಯತ್ನಿಸಲಾಗಿದ್ದು, ರಾಜಕೀಯ ಒತ್ತಡಕ್ಕೊಳಗಾಗಿ ಪೊಲೀಸರು ಆರೋಪಿಗಳ ಬಂಧಿಸುವಲ್ಲಿ ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆಂದು ಮುಧೋಳದ ನ್ಯಾಯವಾದಿ ಕೃಷ್ಣಾ ಕುಲಕರ್ಣಿ ಆರೋಪಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಮೂಲದ ರಿಯಾಜ್ ಅಹಮದ್ ಎಂಬಾತ ಲವ್ ಜಿಹಾದ್ ಹೆಸರಲ್ಲಿ ತಮ್ಮ ಪತ್ನಿ ಸರಿತಾ, ಪುತ್ರ ಪ್ರಣವ್ ಅವರನ್ನು ಕರೆದೊಯ್ದಿದ್ದಾನೆ. ಸಾಲದೆಂಬಂತೆ ಮಕ್ಕಳ ಹೆಸರಲ್ಲಿ ಡಿಪಾಜಿಟ್ ಮಾಡಲಾಗಿದ್ದ ರು. 14 ಲಕ್ಷ ಹಣವನ್ನು ಒಯ್ಯಲಾಗಿದೆ. ಅನಪೇಕ್ಷಿತ ಮತಾಂತರ ಯತ್ನದಿಂದಾಗಿ ತಮ್ಮ ಕುಟುಂಬ ಬೀದಿಗೆ ಬಂದಿದೆ. ಇದೇ ಕೊರಗಲ್ಲಿ ತಮ್ಮ ತಂದೆ ಕಳೆದ ತಿಂಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ತಾವು ಮದುವೆಯಾಗಿ 18 ವರ್ಷಗಳಾಗಿದ್ದು, ಇಬ್ಬರು ಪುತ್ರರಿದ್ದಾರೆ. ವೃತ್ತಿ ಜತೆ ಹಿನ್ನೆಲೆ ಗಾಯಕ ಹಾಗೂ ಸಂಗಿತ ನಿರ್ದೇಶಕನಾಗಿರುವ ನನಗೆ ಎರಡು ವರ್ಷಗಳ ಹಿಂದೆ ರಿಯಾಜ್ ಅಹಮದ್ ಪರಿಚಯವಾದ. ಸಂಗೀತ ಆಸಕ್ತಿಯಿಂದಾಗಿ ಕುಟುಂಬಕ್ಕೆ ಹತ್ತಿರವಾದ. ನಂತರ ನನ್ನ ಪತ್ನಿ ಮುಗ್ದತೆ ದುರುಪಯೋಗಪಡಿಸಿಕೊಂಡು ಆಕೆಯನ್ನು ಇಸ್ಲಾಂಗೆ ಸೆಳೆಯಲು ಯತ್ನಿಸಿ ದಾವಣಗೆರೆ ಕರೆದೊಯ್ದಿದ್ದಾನೆ.
ಪತ್ನಿ ಹಾಗೂ ಓರ್ವ ಪುತ್ರ ಹಾಲಿ ದಾವಣಗೆರೆಯಲ್ಲಿ ರಿಯಾಜ್ ಅಹಮದ್ ಸುಪರ್ದಿಯಲ್ಲಿದ್ದಾನೆ. ಪುತ್ರ ನಮಾಜು ಮಾಡಲು ಮಸೀದಿಗೆ ಹೋಗುತ್ತಿದ್ದಾನೆ. ಪತ್ನಿ ಕೂಡಾ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಧರ್ಮ ಅನುಸರಿಸುತ್ತಿದ್ದಾಳೆ. ಗೃಹಿಣಿಯೋರ್ವಳನ್ನು  ಈ ರೀತಿ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿ ಮತಾಂತರಕ್ಕೆ ಯತ್ನಿಸುತ್ತಿರುವುದರ ಕುರಿತು ಪೂಲೀಸರಿಗೆ ದೂರು ನೀಡಲಾಗಿದೆ. ಪತ್ನಿಯನ್ನು ರಿಯಾಜ್ ಅಹಮದ್ ಬಂಧನದಿಂದ ಮುಕ್ತಿಗೊಳಿಸಬೇಕೆಂದು ಕೋರಿದರೂ ಪೊಲೀಸರು ಸ್ಪಂದಿಸುತ್ತಿಲ್ಲ. ರಿಯಾಜ್ ಅಹಮದ್ ಹಿಂದೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ ಎಂದು ಕುಲಕರ್ಣಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಅಶೋಕ್ ಮುತ್ತಿನಮಠ, ಕಿರಣ ಪವಾಡಶೆಟ್ಟರ, ವಿನಾಯಕ ಚೌಧರಿ, ಸಂಜುರಾಸನಕರ, ಶ್ರೀಶೈಲ ಪಾಟೀಲ, ವಿಶ್ವನಾಥ ಕುಂಟೋಜಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com