ಚನ್ನಪಟ್ಟಣ: ಸಾಮಾಜಿಕ ಅಸಮಾನತೆ ವಿರುದ್ಧ ಮೊಳಗಿದ ಸಾಹಿತ್ಯದ ಕಹಳೆ ವಚನ ಸಾಹಿತ್ಯ 12ನೇ ಶತಮಾನದಲ್ಲಿ ಮೂಡಿದ ವಚನ ಸಾಹಿತ್ಯ ಮೌಢ್ಯತೆಯ ಅಂಧಕಾರದಲ್ಲಿ ಮುಳುಗಿದ್ದ ಸಮಾಜವನ್ನು ಸರಿದಾರಿಗೆ ಕೊಂಡೊಯ್ದ ಮಹಾಜ್ಯೋತಿ ಎಂದು ಗಮಕ ಕಲಾಪರಿಷತ್ ಅಧ್ಯಕ್ಷ ಸಿ.ವಿ.ಶ್ರೀನಿವಾಸ್ ಬಣ್ಣಿಸಿದರು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಾರ್ವಜನಿಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೆರೆಮೇಗಳದೊಡ್ಡಿ ಚನ್ನೇಗೌಡ ಸ್ಮಾರಕದತ್ತಿ ವಚನ ಸಾಹಿತ್ಯ ಹಾಗೂ ದಾಸಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ ಮತ್ತವರ ನಂತರ ಬಂದ ವಚನಕಾರರು ಮಾನವ ಸಮಾಜಕ್ಕೆ ಅರಿವಿನ ಬೆಳಕು ನೀಡಿದ ಮಹಾಚೇತನ ಎಂದರು.
ಪಟ್ಟಭದ್ರರು ಸ್ಥಾಪಿಸಿದ್ದ ಶೋಷಿತ ಸಮಾಜವನ್ನು ಕೆಡವಿ ಮೇಲು ಕೀಳುಗಳಿಲ್ಲದ ಮಾನವ ಸಮಾಜದ ನಿರ್ಮಾಣಕ್ಕೆ ಬುನಾದಿಹಾಕಿದ ವಚನ ಸಾಹಿತ್ಯ ಇಂದಿಗೂ ನಮಗೆ ಪ್ರಸ್ತುತವೆನಿಸುತ್ತಿದ್ದು ವಚನಕಾರರು ನೀಡಿರುವ ಸಂದೇಶಗಳು ಮಾನವನ ಹೃದಯದಿಂದ ಹೃದಯಕ್ಕರಿಯುವ ಅಮೃತವಾಹಿನಿ ಎಂದು ಅಭಿಪ್ರಾಯಪಟ್ಟರು.
ವಿಶ್ವವೇ ಮೆಚ್ಚುವಂತೆ ಮಾಡಿದ ಮಹಾನುಭಾವರು: ವಚನ ಸಾಹಿತ್ಯದ ಅರಿವು ವಿಶ್ವ ಸಾಹಿತ್ಯದ ಅಮೋಘ ಸಾಹಿತ್ಯ ಪ್ರಕಾರಗಳಲ್ಲಿ ಬಹುದೊಡ್ಡ ಸಾಹಿತ್ಯವೆನಿಸಿದ್ದು ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಸಮಾಜದಲ್ಲಿ ಪ್ರಬುದ್ಧತೆ, ದಕ್ಷತೆ, ತಿಳುವಳಿಕೆ ಮತ್ತು ಉದಾತ್ತ ಚಿಂತನೆಗಳನ್ನು ಬಿತ್ತಿದ ವಚನ ಸಾಹಿತ್ಯ ಪ್ರೇಮ, ಸತ್ಯ, ಕರುಣೆ ಪ್ರೀತಿಯ ಬೆಳೆ ತೆಗೆದು ಕನ್ನಡ ನಾಡಿನ ಹೃದಯ ಶ್ರೀಮಂತಿಕೆಯನ್ನು ವಿಶ್ವವೇ ಮೆಚ್ಚುವಂತೆ ಮಾಡಿದ ಮಹಾನುಭಾವರು ಎಂದರು.
ವಚನ ಸಾಹಿತ್ಯದ ನಂತರ ಮೂಡಿಬಂದ ದಾಸ ಸಾಹಿತ್ಯ ನಾಡಿನಲ್ಲಿ ಮತ್ತೊಂದು ರೀತಿಯ ಸಂಚಲನ ಮೂಡಿಸಿತು, ಭಕ್ತಿ ಚಳುವಳಿಯ ಮೂಲಕ ಹುಟ್ಟಿದ ದಾಸ ಸಾಹಿತ್ಯ ಮಾನವ ಜಗತ್ತಿನ ಕಳಂಕಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗುವ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಕ್ಕೆ ಮತ್ತೊಂದು ಗರಿಯಾಯಿತು ಎಂದರು.
ಭಕ್ತಿ ಮುಖ್ಯವೇ ವಿನಾ ಜಾತಿಯಲ್ಲ: ದಾಸ ಸಾಹಿತ್ಯದ ಪ್ರಮುಖರೆನಿಸಿದ ಪುರಂದರದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಹುಟ್ಟುಹಾಕುವ ಮೂಲಕ ದಕ್ಷಿಣ ಭಾರತದ ಯಾವ ಭಾಷೆಗೂ ಇಲ್ಲದ ಮಹತ್ತರ ಕೊಡುಗೆಯನ್ನು ಕನ್ನಡಕ್ಕೆ ನೀಡಿದರು. ಭಗವಂತನನ್ನು ಒಲಿಸಿ ಕೊಳ್ಳಲು ಭಕ್ತಿ ಮುಖ್ಯವೇ ವಿನಾ ಜಾತಿಯಲ್ಲ ಎಂಬುದನ್ನು ಸಾಬೀತು ಪಡಿಸಿದ ಕನಕದಾಸರಾದಿಯಾಗಿ ದಾಸ ಸಾಹಿತ್ಯ ಮಹನೀಯರ ಅತ್ಯಮೂಲ್ಯ ಸಂದೇಶವನ್ನು ಯುವ ಪೀಳಿಗೆ ಅಭ್ಯಾಸ ಮಾಡಿ ಎಂದು ಕರೆ ನೀಡಿದರು.
ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಮಾತನಾಡಿ, ತಂದೆ ತಾಯಿಗಳಿಗೆ, ಗುರು-ಹಿರಿಯರಿಗೆ ಗೌರವಿಸುವ ಈ ಸಮಾಜದಲ್ಲಿ ಸಮಾಜಕ್ಕೆ ಆದರ್ಶಪ್ರಿಯವಾಗುವ ಇಂದಿನ ವಿದ್ಯಾರ್ಥಿಗಳು ವಚನಕಾರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಕೀಲ ಎಂ.ಕೆ. ನಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದಿನನಿತ್ಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಾಡು ನುಡಿಗಳ ಹಾಗೂ ನೆಲ-ಜಲಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ತಾವೆಲ್ಲರೂ ಕಂಕಣಬದ್ಧರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಕತ್ತಲೆ ತುಂಬಿದ ಬದುಕಿಗೆ ಅರಿವಿನ ಜ್ಯೋತಿ ಬೆಳಗಿಸಿ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದ ವಚನಕಾರರು ಹಾಗೂ ದಾಸ ಪರಂಪರೆ ಇಂದಿಗೂ ಶ್ರೇಷ್ಠತೆ ಉಳಿಸಿಕೊಂಡಿವೆ. ದತ್ತಿ ದಾನಿಗಳ ಸಹಾಯದಿಂದ ಇಂತಹ ಕಾರ್ಯಕ್ರಮ ಆಯೋಜನೆಗೆ ಸುಲಬವಾಗಿದ್ದು ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು ಕನ್ನಡಾಭಿಮಾನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಲಿ ಎಂದು ತಿಳಿಸಿದರು.
ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಹೆಚ್.ಕೃಷ್ಣೇಗೌಡ, ಟಿ.ಸಿದ್ದೇಗೌಡ, ಶಿಕ್ಷಕರಾದ ಡಿ.ಪುಟ್ಟಸ್ವಾಮಿ, ಸೋಮರಾಜು, ತಿಮ್ಮರಾಜು, ಸಿ.ಶಿವಣ್ಣ ಗೌರವ ಕಾರ್ಯದರ್ಶಿಗಳಾದ ವಿಜಯ್ ರಾಂಪುರ ಸ್ವಾಗತಿಸಿ, ಬ್ರಹ್ಮಣೀಪುರ ರಾಮಕೃಷ್ಣಯ್ಯ ಶಾರದಾನಾಗೇಶ್, ರಾಂಪುರ ಸಿದ್ದರಾಜು ಉಪಸ್ಥಿತರಿದ್ದರು.
Advertisement