-ಪರಶುರಾಮ ಶಿವಶರಣ
ಬಿಜಾಪುರ: ಇಲ್ಲಿನ ಅಕ್ಷರ ಜಾತ್ರೆ ಮುಗಿದ ನಂತರ ಬಂದವರು ಹೋದರು. ಎಂದಿನಂತ ಬಿಜಾಪುರ ಮತ್ತೆ ಬಿಸಿಲು ಹೊದ್ದು ಧೂಳಿನಲ್ಲಿ ಮಲಗಿತ್ತು. ಖಾಲಿ ಖಾಲಿ ಅನುಭವ. ಆದರೆ ಅಕ್ಷರ ಜಾತ್ರೆ ನೆನಪುಗಳ ಮಾತ್ರ ಬಿಜಾಪುರ ಜನರಲ್ಲಿ ಮಡುಗಟ್ಟಿವೆ.
ಈಗ ಸಮ್ಮೇಳನ ಜಾಗದಲ್ಲಿ ನಿರವ ಆವರಿಸಿತ್ತು. ಅಲ್ಲಿ ಸಮ್ಮೇಳನ ನಡೆದ ಕುರುಹುಗಳಿದ್ದವು. ಎಲ್ಲಿ ನೋಡಿದರೂ ಸಮ್ಮೇಳನದ ಮಂಟಪ, ಸ್ಟಾಲ್ಗಳನ್ನು ಕಿತ್ತುವುದರ ಜೊತೆ ಜೊತೆಯಲ್ಲಿಯೇ ಕಸಗೂಡಿಸುವ ಕಾರ್ಯ ಭರದಿಂದ ಸಾಗಿತ್ತು.
ಎಲ್ಲರೂ ಅಲ್ಲಿದ್ದ ಕಾರ್ಮಿಕರು ಹಾಕಲಾಗಿದ್ದ ವೇದಿಕೆಗಳನ್ನು ಬಿಚ್ಚಿ ತಮ್ಮೂರಿಗೆ ತೆರಳುವ ತರಾತುರಿಯಲ್ಲಿದ್ದರು. ಮಂಟಪ ಹಾಗೂ ಮಳಿಗೆಗಳ ಪೆಂಡಾಲ ಬಿಚ್ಚುತ್ತಿದ್ದಂತೆಯೇ ಸಾಮಗ್ರಿಗಳನ್ನು ಲಾರಿ, ಟ್ರ್ಯಾಕ್ಟರ್ಗಳಿಗೆ ಹೇರಿಕೊಂಡು ವಾಹನಗಳು ಸಾಗುವುದು ಸಾಮಾನ್ಯವಾಗಿತ್ತು.
ಅಡುಗೆಗಾಗಿ ಸಂಗ್ರಹಿಸಲಾಗಿದ್ದ ಹೆಚ್ಚುವರಿ ತರಕಾರಿಯನ್ನು ಸೈನಿಕ ಶಾಲೆಯ ಮಕ್ಕಳಿಗೆ ಊಟ ತಯಾರಿಕೆಗೆ ನೀಡುವ ಮೂಲಕ ಕಾಯಿಪಲ್ಯ ಹಾಳಾಗುವುದನ್ನು ತಪ್ಪಿಸಿ ಸಂಘಟಕರು ಜಾಣತನ ಮೆರೆದರು.
ಸೈನಿಕ ಶಾಲೆಯ ಆವರಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ, ರಾಶಿಯಾಗಿ ಬಿದ್ದಿತ್ತು. ಇದು ಬಿಜಾಪುರ ಸೈನಿಕ ಶಾಲೆಯ ಆವರಣದಲ್ಲಷ್ಟೇಯಲ್ಲ. ನಗರದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಹಾಗೇ ಬಿದ್ದಿತ್ತು.
ನಗರಸಭೆ ಪೌರ ಕಾರ್ಮಿಕರು ಬೆಳ್ಳಂಬೆಳಿಗ್ಗೆ ನಗರದ ಎಲ್ಲ ಬೀದಿಗಳನ್ನು ಕಸಗೂಡಿಸಿ ಸ್ವಚ್ಛಗೊಳಿಸಿದರು. ಬೆಳಗ್ಗೆ ಆರು ಗಂಟೆಯಿಂದ ಆರಂಭಗೊಂಡ ಸ್ವಚ್ಛತೆ ಕಾರ್ಯ 10 ಗಂಟೆವರೆಗೆ ಮುಂದುವರಿಯಿತು. ಅನಂತರ ಪೌರ ಕಾರ್ಮಿಕರು ನಗರಸಭೆ ಸ್ಟೋರ್ನಲ್ಲಿಯೇ ತಿಂಡಿ,ಚಹ ಮುಗಿಸಿಕೊಂಡು ಕೈಯಲ್ಲಿ ಪೊರಕೆ ಹಿಡಿದುಕೊಂಡು ಸೈನಿಕ ಶಾಲೆಗೆ ತೆರಳಿದರು.
ಬರೋಬ್ಬರಿ 200 ಪೌರ ಕಾರ್ಮಿಕರು ಸೈನಿಕ ಶಾಲೆಯ ಆವರಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸಿ ಕಸದ ಗುಂಪಿಯನ್ನು ಹಾಕಿದರು. 150 ಲೋಡ್ ಕಸವನ್ನು ನಗರಸಭೆಯವರು ನಗರದ ಆಚೆ ಇರುವ ನಗರಸಭೆ ಕಸದ ತೊಟ್ಟಿಗೆ ಟ್ರ್ಯಾಕ್ಟರ್ ಮೂಲಕ ಸಾಗಿಸಿದರು. ಮೂರು ದಿನ ಅಡುಗೆ ಕೋಣೆಯಲ್ಲಿ ಉಳಿದ ದಿನವೂ 5 ಟ್ರ್ಯಾಕ್ಟರ್ನಂತೆ 15 ಲೋಡ್ಗಳನ್ನು ನಗರಸಭೆ ಕಸದ ತೊಟ್ಟಿಗೆ ಸಾಗಿಸಲಾಗಿದೆ. ಸ್ವಚ್ಛತಾ ಅಭಿಯಾನ ಸಂಜೆ 4 ಗಂಟೆವರಗೆ ಮುಂದುವರಿದಿತ್ತು.
ಸಮರೋಪಾದಿಯಲ್ಲಿ ಸ್ವಚ್ಛತೆಗೆ ಕ್ರಮ: ಸಾಹಿತ್ಯ ಸಮ್ಮೇಳನದಿಂದಾಗಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಛಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ 200 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಸಂಜೆವರೆಗೆ ಬಿಜಾಪುರದ ಪ್ರಮುಖ ರಸ್ತೆಗಳು ಹಾಗೂ ಸೈನಿಕಶಾಲೆಯ ಆವರಣವನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಾಜಶೇಖರ ಅವರು ತಿಳಿಸಿದರು.
Advertisement