ಬಿಜಾಪುರ: ನಮಗೆ ದೊರೆತಿರುವ ಸುಂದರ ಕಣ್ಣುಗಳಿಂದ ಅದ್ಭುತವಾದ ಜಗತ್ತಿನ ಸೌಂದರ್ಯವನ್ನು ಸವಿಯುತ್ತ, ಇತರರನ್ನು ಪ್ರೀತಿಸುತ್ತ ಸುಂದರ ಬದುಕು ಸಾಗಿಸಬೇಕು ಎಂದು ಬಿಜಾಪುರದ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಆಸ್ಟ್ರೇಲಿಯಾ ಪರ್ತ್ನಲ್ಲಿ ಈಚೆಗೆ ಜರುಗಿದ ಅಸ್ಟ್ರೇಲೇಸಿಯಾ 6ನೇ ಅಂತಾರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಕಾರ್ಯದಲ್ಲಿ ತೊಡಗಿದರೆ, ಯಾವುದನ್ನು ಸಾಧಿಸಿದರೆ ಜೀವನ ಸಾರ್ಥಕವಾಗುವುದು ಅಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಜಗತ್ತು ಸತ್ಯದ ಅನುಭೂತಿಯ ಸೃಷ್ಟಿ, ಶಕ್ತಿ ನಮ್ಮಲ್ಲಿ ಇರುವುವರೆಗೂ ತೃಪ್ತಿಯ ದೀಪ ಬೆಳೆಗಿಸುತ್ತ ಭಾವಶುದ್ಧಿಯಿಂದ ಕಾರ್ಯಗಳನ್ನು ಮಾಡಿ ಸತ್ಯವನ್ನು ನುಡಿಯುತ್ತ ಈ ಪ್ರಪಂಚವನ್ನೇ ದೇವಲೋಕವಾಗಿಸಬೇಕು ಎಂದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನ ನಡೆಸಲು ಸಹಕರಿಸುವ ಪಂಚೇಂದ್ರಿಯಗಳ ನಡುವೆ ಸಾಮರಸ್ಯ ಸಾಧಿಸಿ ರಾಗ-ದ್ವೇಷಗಳಿಲ್ಲದೆ ಲೌಕಿಕ ವ್ಯವಹಾರಗಳ ನಡುವೆ ಇದ್ದು ಪಾರಮಾರ್ಥಿಕವನ್ನು ಸಾಧಿಸಬೇಕು ಎಂದರು.
ಡಾ. ಮಹಾಂತೇಶ ಬಿರಾದಾರ, ಶಶಿ ಶಿವಮ್ಮನವರ ಸಂಪಾದಿಸಿದ ಶರಣ ಸಂಗಮ ಸ್ಮರಣ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತೀಯ ದೂತಾವಾಸ ಕೌನ್ಸಿಲ್ ಜನರಲ್ ಸುಬ್ಬರಾಯ್ಡು, ಜೆ.ಎಸ್.ಎಸ್. ವಿವಿ ಉಪಕುಲಪತಿ ಡಾ. ಬಿ. ಸುರೇಶ, ಪಶ್ಚಿಮ ಅಸ್ಟ್ರೇಲಿಯಾ ಭಾರತೀಯ ಸಂಘ ಅಧ್ಯಕ್ಷ ಮುಕೇಶ ಜೈನ್, ಫರ್ತ್ ವೇದ ತರಬೇತಿ ಮತ್ತು ಸಂಸ್ಕೃತಿ ಸಂಘಟನೆ ಅಧ್ಯಕ್ಷ ಶ್ರೀಪಾದ ಭಟ್, ಕನ್ನಡ ಸಂಘ ಅಧ್ಯಕ್ಷ ಸತ್ಯಜೀತ್ ಸುವರ್ಣ ವೇದಿಕೆಯಲ್ಲಿದ್ದರು.
ಬಸವ ಸಮಿತಿ ಪರ್ತ್ ಅಧ್ಯಕ್ಷ ಡಾ. ಜಗದೀಶ ಜಾಂಬೋಟಿ ಸ್ವಾಗತಿಸಿದರು. ಚಿದಾನಂದ ಜವಳಿ ನಿರೂಪಿಸಿದರು. ಕಾರ್ಯದರ್ಶಿ ನೀಲಾ ಗುಬ್ಬಿ ವಂದಿಸಿದರು. ಸಮ್ಮೇಳನದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಆಯ್ದಕ್ಕಿ ಮಾರಯ್ಯ ರೂಪಕ ಸಾದರಪಡಿಸಲಾಯಿತು. ಸುಧಾ ಹೆಗಡೆ, ಅಮೃತಾ ನಂದಿ ವಚನ ಸಂಗೀತ ಕಾರ್ಯಕ್ರಮ ನೀಡಿದರು. ಚೈತ್ರಾ ಜಗದೀಶ ಅವರು ವಚನ ಗಾಯನದ ಧ್ವನಿ ಸುರುಳಿ ವಚನಧಾರೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
Advertisement