ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜ್ ರವೀಂದ್ರ ಕಲಾಭವನದಲ್ಲಿ ಶನಿವಾರ 'ಬಿ.ವಿ.ಕಕ್ಕಿಲಾಯ ಪ್ರೇರಿತ ಉಪನ್ಯಾಸದಲ್ಲಿ ಉದ್ಯಮ ಶಾಹಿಯಿಂದ ಅಪಹೃತ ಭಾರತ ಕೃಷಿ ಕ್ಷೇತ್ರ' ಬಗ್ಗೆ ಉಪನ್ಯಾಸ ನೀಡಿದರು.
ನಿವೃತ್ತಿ ವೇತನ, ಪಿಂಚಣಿ, ಭವಿಷ್ಯ ನಿಧಿಯನ್ನು ಖಾಸಗಿ ಹಣಕಾಸು ಕ್ಷೇತ್ರದಲ್ಲಿ ಹೂಡಬಹುದು ಎಂಬ ಹೊಸ ನೀತಿಯನ್ನು ಮಾಧ್ಯಮ ಸಂಭ್ರಮದಿಂದ ವರ್ಣಿಸುತ್ತಿವೆ. ಆದರೆ 2008ರ ಆರ್ಥಿಕ ವ್ಯವಸ್ಥೆ ಮಹಾ ಪತನದಿಂದಾಗಿ ಅಮೆರಿಕದಲ್ಲಿ ಎಷ್ಟೋ ಮಂದಿ ತಮ್ಮ ನಿವೃತ್ತಿ ವೇತನ, ಪಿಂಚಣಿಯನ್ನು ಖಾಸಗಿ ಹೂಡಿಕೆಯಲ್ಲಿ ತೊಡಗಿಸಿದ ಕಾರಣ ಹಣವನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ ಈ ಪರಿಸ್ಥಿತಿ ಬರಬಹುದು. ಖಾಸಗಿ ಕ್ಷೇತ್ರದಲ್ಲಿ ಬದುಕಿನ ಹಣವನ್ನು ಹೂಡಬೇಡಿ ಎಂದು ಎಚ್ಚರಿಸಿದರು.
ಕೇವಲ 4-5 ಸಂಸ್ಥೆಗಳು ಕೋಟಿಗಟ್ಟಲೆ ರೈತರನ್ನು ನಿಯಂತ್ರಿಸುತ್ತಿವೆ. ಕಾರ್ಪೊರೇಟ್ ಸಂಸ್ಥೆಗಳು ರೈತ ಯಾವ ಬೆಳೆ ಬೆಳೆಯಬೇಕು ಎಂದು ನಿರ್ಧರಿಸುತ್ತಿವೆ. ಕೊಲ್ಕತ್ತದ ಐಟಿಸಿ ಪ್ರತಿನಿಧಿಗಳು ತಮಿಳ್ನಾಡಿನಲ್ಲಿ ರೈತರಿಗೆ ರಾಗಿ ಬೆಳೆಯಲು ಹೇಳಿಕೊಡುತ್ತಿರುವ ವಿಪರ್ಯಾಸಗಳು ಸೃಷ್ಟಿಯಾಗಿದೆ. ಎಲ್ಲವನ್ನು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ನೀಡಲಾಗುತ್ತಿದೆ. ಸರ್ವಾಧಿಕಾರವನ್ನು ವಿರೋಧಿಸಬೇಕು. ಸ್ಟಿರಾಯ್ಡ್ ಬಳಸಿದ ಕ್ರೀಡಾಳುವಂತೆ ಕೃಷಿ ಮಾಡಲಾಗುತ್ತಿದೆ. ತಕ್ಷಣದ ಲಾಭದ ಆಸೆಯಿಂದ ಹತ್ತು ವರ್ಷ ಬಳಿಕ ರೈತ ಸಾಯುವ ಸ್ಥಿತಿ ಉಂಟಾಗಲಿದೆ.
ಪತ್ರಕರ್ತರು ಉಳಿಯುತ್ತಿರಲಿಲ್ಲ!
ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ರೈತರಿಗೆ ಹೋಲಿಸಿದರೆ ಶೇ.45ಕ್ಕೂ ಹೆಚ್ಚು. ಇದನ್ನು ಹೇಳಿದರೆ ಸತ್ತವರಿಗೆ ಕುಡಿತದ ಚಟ ಇತ್ತು, ಹಾಗೆ ಆತ್ಮಹತ್ಯೆ ಮಾಡಿಕೊಂಡರು ಎಂದು ಪತ್ರಕರ್ತರೊಬ್ಬರು ವಾದಿಸಿದರು. ಕುಡಿತದ ಚಟ ಇರುವವರು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಯಾವ ಪತ್ರಕರ್ತನೂ ಉಳಿಯುತ್ತಿರಲಿಲ್ಲ, ಪ್ರಗತಿ ಪರ, ಬುದ್ಧಿಜೀವಿಗಳು, ಶೈಕ್ಷಣಿಕ ಕ್ಷೇತ್ರ ತಜ್ಞರೂ ಅಲ್ಪ ಸ್ವಲ್ಪ ಉಳಿಯಬೇಕಿತ್ತು ಎಂದು ಚಟಾಕಿ ಹಾರಿಸಿದರು. ಈ ಸಂದರ್ಭ ಪಿ. ಸಾಯಿನಾಥ್ ಕೃತಿ ಅನುವಾದಿಸಿ 'ಅವಧಿ' ಸಂಪಾದಕ ಜಿ.ಎನ್.ಮೋಹನ್ ಬರೆದೆ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಜಿ.ಎನ್.ಮೋಹನ್, ಕೆ. ಫಣಿರಾಜ್ ಇದ್ದರು.