ದಿಟ್ಟತನದಲ್ಲಿ ಅಡಗಿದೆ ಗಟ್ಟಿ ಸಾಹಿತ್ಯ
ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಆ.4
ದಿಟ್ಟತನ ತೋರಿದಾಗ ಮಾತ್ರ ಗಟ್ಟಿ ಸಾಹಿತ್ಯ ಹೊರಬರಲು ಸಾಧ್ಯ. ಸಾಹಿತಿಯಾದವರಿಗೆ ಸಾಹಿತ್ಯ ಪರಂಪರೆಯ ಪರಿಜ್ಞಾನದ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಅರಿವು ಇರಬೇಕೆಂದು ಕನ್ನಡ ಶಾಯರಿ ಜನಕ ಇಟಗಿ ಈರಣ್ಣ ಹೇಳಿದ್ದಾರೆ.
ಆಯಾ ವ್ಯಕ್ತಿಗಳ ಆಲೋಚನೆಗಳ ಮೊತ್ತವೇ ಅವರ ವ್ಯಕ್ತಿತ್ವವಾಗುತ್ತದೆ. ಆದ್ದರಿಂದ ಬರಹಗಾರರು ಉತ್ತಮ ಆಲೋಚನೆಯ ಲಹರಿಯನ್ನು ಹೊಂದಿರಬೇಕಾಗುತ್ತದೆ. ಸಾಮಾಜಿಕ ಪರಿವರ್ತನೆಯ ಶಕ್ತಿ ಹೊಂದಿದ ಸಾಹಿತಿಗಳು ತಮ್ಮ ಲೇಖನಿಯನ್ನು ಖಡ್ಗವಾಗಿ ಬಳಸಬೇಕಾದ ಅನಿವಾರ್ಯತೆಗೆ ಒಳಗಾಗಬೇಕಾಗುತ್ತದೆ ಎಂದು ಸಿನಿಮಾ ಸಾಹಿತಿಯೂ ಆಗಿರುವ ಡಾ. ಇಟಗಿ ಈರಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಸ್ಎಸ್ಎಲ್ ಕಾನೂನು ಕಾಲೇಜು ಸಭಾಂಗಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡ ದಿಟ್ಟ ಸಾಹಿತ್ಯಕ್ಕೆ ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂಚ ಸಾಧಕರಿಗೆ ಡಿವಿಜಿ ಪ್ರಶಸ್ತಿ ಹಾಗೂ ಸಾಧಕ ಸಾಹಿತಿಗಳಿಗೆ ಸಾಹಿತ್ಯ ಸಮ್ಮಾನ ಮಾಡಿ ಅವರು ಮಾತನಾಡಿದರು.
ಸಾಹಿತಿಗಳ ಜವಾಬ್ದಾರಿ ದೊಡ್ಡದು: ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ, ಸ್ತ್ರೀ ಕುಲಕ್ಕೆ ರಕ್ಷಣೆ ಇಲ್ಲದಂತಾಗಿದೆ. ಸಂಬಂಧಗಳು ಸತ್ತು ಹೋಗಿ ಮಾನವನ ಮನಸ್ಸು ವಿಕಾರವಾಗಿ ರಾಕ್ಷಸ ಪ್ರವೃತ್ತಿ ತಾಂಡವಾಡುತ್ತಿದೆ. ಸಿನಿಮಾ, ಮೊಬೈಲ್, ಅಂತರ್ಜಾಲಕ್ಕೆ ಸಿಲುಕಿ ಇಂದಿನ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಇಂತಹ ಕಲುಷಿತ ವಾತಾವರಣ ತಿಳಿಗೊಳಿಸುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ ಎಂದರು.
ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಸಾಹಿತಿಗಳಾದ ಡಾ. ಸ್ವಾಮಿರಾವ ಕುಲ್ಕರ್ಣಿ, ಡಾ. ಹನುಮಂತರಾವ ದೊಡ್ಡಮನಿ, ಡಾ. ನಾಗೇಂದ್ರ ಮಸೂತಿ, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್, ಹುಸೇನಭಾಷಾ ಮುರಗಾನೂರ ರವರಿಗೆ ಡಿವಿಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ