ಮಡಿಕೇರಿ: ಸ್ವಚ್ಛ ಭಾರತ ನಿರ್ಮಾಣಕ್ಕೆ ಜೇಸಿಐ ಸಾಕಷ್ಟು ಯೋಜನೆ ರೂಪಿಸಿದ್ದು, ಕಾವೇರಿ ಸ್ವಚ್ಛತಾ ಆಂದೋಲನಕ್ಕೂ ಕೈಜೋಡಿಸಲಿದೆ ಎಂದು ಜೇಸಿಐನ ರಾಷ್ಟ್ರೀಯ ಅಧ್ಯಕ್ಷ ದೀಪಕ್ ನಹಾರ್ ಭರವಸೆ ನೀಡಿದ್ದಾರೆ.
ವೀರಾಜಪೇಟೆ ಬಳಿಯ ಬಿಟ್ಟಂಗಾಲದಲ್ಲಿ ಜೇಸೀಐ ವಲಯ 14ರ ವತಿಯಿಂದ ಜರುಗಿದ ಪ್ರಗತಿ ಮತ್ತು ಅಭಿವೃದ್ಧಿ ಕುರಿತ ಕಾರ್ಯಾಗಾರಕ್ಕೆ ಆಗಮಿಸಿದ ಸಂದರ್ಭ ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಗುಜರಾತ್ ಮೂಲದ ದೀಪಕ್ ನಹಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭಾರತೀಯ ಜೇಸೀಐನಲ್ಲಿ ಪ್ರಸ್ತುತ 43 ಸಾವಿರ ಸದಸ್ಯರಿದ್ದು ಒಗ್ಗಟ್ಟಿನಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಜೇಸಿಐ ತೊಡಗಿಸಿಕೊಂಡಿದೆ ಎಂದರು.
ಭಾರತ್ ಸ್ವಚ್ಛತಾ ಆಂದೋಲನದಲ್ಲಿ ತೊಡಗಿಸಿರುವ ಜೇಸಿಐ ಕೊಡಗಿನಲ್ಲಿ ಉಗಮಿಸಿ ಕರ್ನಾಟಕ ಮತ್ತು ತಮಿಳುನಾಡಿನ ಜೀವನದಿಯಾಗಿರುವ ಕಾವೇರಿಯ ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸಾಗಿರುವ ಕಾವೇರಿ ಸ್ವಚ್ಛತಾ ಆಂದೋಲನಕ್ಕೂ ಕೈಜೋಡಿಸಲಿದೆ ಎಂದು ಭರವಸೆ ನೀಡಿದರು.
ಸ್ವಚ್ಛ ಭಾರತ್ ಅಭಿಯಾನ ಒಂದು ದಿನದಲ್ಲಿ ಮುಗಿಯುವಂಥದ್ದಲ್ಲ. ಮುಂದಿನ ತಲೆಮಾರಿಗೂ ಈ ಆಂದೋಲನವನ್ನು ಯಶಸ್ವಿಯಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳಿಂದಲೇ ಶುಚಿತ್ವದ ಮೊದಲ ಪಾಠ ಆರಂಭವಾಗಿದೆ ಎಂದು ದೀಪಕ್ ನಹಾರ್ ಹೇಳಿದರು.
ಜೀಸಿಐ ಈಗಾಗಲೇ ತನ್ನ ವಿಶಿಷ್ಟ ಕಾರ್ಯಕ್ರಮವಾಗಿ ರಕ್ತದಾನಿಗಳ ಮಾಹಿತಿ ಸಂಗ್ರಹಣೆ ಆರಂಭಿಸಿದ್ದು, ರಕ್ತ ಅಗತ್ಯವುಳ್ಳವರು ಮತ್ತು ರಕ್ತದಾನ ಮಾಡಲಿಚ್ಛಿಸುವವರು 9791747474 ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ಅಗತ್ಯ ನೆರವು ಜೇಸಿಐ ಮೂಲಕ ದೊರಕಲಿದೆ ಎಂದೂ ಜೇಸೀಐ ರಾಷ್ಟ್ರೀಯ ಅಧ್ಯಕ್ಷ ದೀಪಕ್ ನಹಾರ್ ಮಾಹಿತಿ ನೀಡಿದರು.
ಮಲೇರಿಯಾ ನಿವಾರಣೆ ನಿಟ್ಟಿನಲ್ಲಿ ಈಗಾಗಲೇ ಸ್ಲಂಗಳು ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಜೇಸೀಐನಿಂದ ಉಚಿತವಾಗಿ ನೆಟ್ಗಳನ್ನು ವಿತರಿಸಲಾಗುತ್ತಿದ್ದು ಸೊಳ್ಳೆಗಳನ್ನು ನಿರ್ಮೂಲನೆ ಮಾಡಿ ಮಲೇರಿಯಾಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ಜಾರಿಯಲ್ಲಿದೆ ಎಂದೂ ದೀಪಕ್ ನಹಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೇಸಿಐ ವಲಯ 14ರ ಅಧ್ಯಕ್ಷ ಮುದೋಶ್ ಪೂವಯ್ಯ ಮಾತನಾಡಿ, ಜೇಸಿಐ 11 ಕಂದಾಯ ಜಿಲ್ಲೆಗಳನ್ನು ಹೊಂದಿರುವ ವಲಯ 14 ರಲ್ಲಿ 800 ಸದಸ್ಯರಿದ್ದು ಹಲವಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಡಿಕೇರಿಯಲ್ಲಿಯೂ ಜೇಸಿಐ ಘಟಕ ಆರಂಭವಾಗಿದ್ದು, ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಪೊನ್ನಂಪೇಟೆ, ಹುದಿಕೇರಿ, ವಿರಾಜಪೇಟೆ, ಗೋಣಿಕೊಪ್ಪಲುಗಳಲ್ಲಿ ಜೇಸಿಐ ಸಕ್ರಿಯವಾಗಿದೆ ಎಂದು ಮಾಹಿತಿ ನೀಡಿದರು.
ವಿರಾಜಪೇಟೆ ಜೇಸಿಐ ಅಧ್ಯಕ್ಷ ಅಪ್ಪಣ್ಣ, ಕಾರ್ಯಾಗಾರ ಸಮಿತಿ ಅಧ್ಯಕ್ಷ ರಾಜಾ ಸುಬ್ಬಯ್ಯ, ಸಲಹೆಗಾರ ಪಿ.ಟಿ. ಸೈಮನ್, ತರಬೇತುದಾರ ನಾಗೇಶ್ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೊಡವ ಸಾಂಸ್ಕೃತಿಕ ನೃತ್ಯಗಳೂ ಕಾರ್ಯಾಗಾರಕ್ಕೆ ಬಂದಿದ್ದ ಜೇಸಿಐ ವಲಯದ ವಿವಿಧೆಡೆ ಸದಸ್ಯರ ಮನಸೆಳೆಯಿತು.
Advertisement