ಭೂಮಿ ಇಲ್ಲದಿದ್ದರೆ ಎಲ್ಲಿಯ ನಾಡು, ನುಡಿ ಬೆಳವಣಿಗೆ? ಪಿಚ್ಚಳ್ಳಿ ಶ್ರೀನಿವಾಸ್ ಪ್ರಶ್ನೆ

ಕನ್ನಡಪ್ರಭ ಸಂದರ್ಶನ

ಟಿ ಪಾ.ಶ್ರೀ.ಅನಂತರಾಮ್
ನಾಡಿಗೆ ಮೊದಲ ಮುಖ್ಯಮಂತ್ರಿಯನ್ನು ನೀಡಿದ ಕೀರ್ತಿ ಬಂಗಾರಪೇಟೆ ತಾಲೂಕಿಗೆ ಸಲ್ಲುತ್ತದೆ. ತ್ರಿಭಾಷ ಸೂತ್ರದಡಿ ಯಾವುದೇ ಸಂಘರ್ಷಗಳಿಲ್ಲದೆ ಇಲ್ಲಿನ ಜನರು ನಾಜೂಕಾಗಿ ಬದುಕುತ್ತಿರುವುದರಿಂದ ಭಾರತದ ಭೂಪಟದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ತಾಲೂಕಿನ ಬೇತಮಂಗಲದಲ್ಲಿ ಜೂ.13ರಂದು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಬಾರಿ ಸಾಹಿತಿಯ ಬದಲಿಗೆ ಜಾನಪದ ಗಾಯಕ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ವಿಶೇಷ. ಈ ಹಿನ್ನೆಲೆಯೊಂದಿಗೆ ಅವರೊಂದಿಗಿನ ಮಾತುಕತೆ ಇದು.

ಟ ಸಾಹಿತ್ಯ ಸಮ್ಮೇಳನಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಏನೇನಿಸುತ್ತದೆ?
- ಇದು ಬಯಸದೆ ಬಂದ ಭಾಗ್ಯ. ನಾನೇನು ಸಾಹಿತಿ ಅಲ್ಲ. ಆದರೆ, ಹತ್ತಾರು ಜನಪ್ರಿಯ ಸಾಹಿತಿಗಳು, ಕವಿಗಳು ಬರೆದಿರುವ ಕವಿತೆ ಹಾಡಿನ ರೂಪದಲ್ಲಿ ದೇಶ, ವಿದೇಶಕ್ಕೆ ಪರಿಚಯಿಸಿದ್ದೇನೆ. ಹಾಡು ತೋರಿದ ಹಾದಿಯಲ್ಲಿ ಪಯಣಿಸುತ್ತಿರುವ ನನಗೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ.
ಟ ಯಾವ ವಿಚಾರಗಳ ಮೇಲೆ ಸಮ್ಮೇಳನಗಳು ಬೆಳಕು ಚೆಲ್ಲಬೇಕು?
- ಸಾಹಿತ್ಯ ಸಮ್ಮೇಳನಗಳು ಅಂದರೆ ಸಾಮಾನ್ಯವಾಗಿ ಮೆರವಣಿಗೆ, ಭಾಷಣ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಎಂಬುದು ಎಲ್ಲರಿಗೂ ಗೊತ್ತು. ಇದರ ಜೊತೆಗೆ ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ನಿವಾರಣೆ ಮಾಡುವ ಬಗ್ಗೆಯೂ ಚರ್ಚೆಗಳಾಗಬೇಕು. ಅಂತರ್ಜಲ ಸಮಸ್ಯೆ, ಪೂರ್ವಿಕರು ಕಟ್ಟಿರುವ ಕೆರೆ-ಕುಂಟೆ, ಕಲ್ಯಾಣಿಗಳ ಸಂರಕ್ಷಣೆ ಮತ್ತು ಸದ್ಬಳಕೆ, ಪರಿಸರ ನಾಶದಿಂದಾಗುವ ಹಾನಿ, ಮುಂದಿನ ಪೀಳಿಗೆಯ ಭವಿಷ್ಯ ಇವುಗಳ ಕಡೆ ಹೆಚ್ಚಿನ ಚರ್ಚೆಗಳು, ಸಂವಾದ ನಡೆಯಬೇಕು.
ಟ ಸಾಹಿತ್ಯ ಸಮ್ಮೇಳನಗಳ ಮೂಲಕ ಕೆರೆ-ಕಲ್ಯಾಣಿಗಳ ಅಭಿವೃದ್ಧಿ ಸಾಧ್ಯವೇ?
- ಕೆರೆ-ಕಲ್ಯಾಣಿಗಳ ಅಭಿವೃದ್ಧಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಸಂಬಂಧವಿಲ್ಲದೇ ಇರಬಹುದು. ಆದರೆ, ಪೂರ್ವಿಕರು ಕಟ್ಟಿಸಿದ ಕೆರೆಗಳನ್ನು ಹಾಳು ಮಾಡಿರುವುದು ನಾವೇ. ಕೆರೆ, ಕುಂಟೆಗಳು ಉಳಿಯದಿದ್ದರೆ ರೈತರಾಗಲಿ, ಕೂಲಿಕಾರರಾಗಲಿ, ನಾವಾಗಲಿ ಈ ಭೂಮಿಯಲ್ಲಿ ಉಳಿಯಲು ಆಗುವುದಿಲ್ಲ. ಭೂಮಿಯೇ ಇಲ್ಲದ ಮೇಲೆ ನಾಡು-ನುಡಿ ಬೆಳವಣಿಗೆ ಹೇಗೆ ಸಾಧ್ಯ? ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಸಾಹಿತ್ಯ ಸಮ್ಮೇಳನಗಳ ಮೂಲಕ ಆದರೆ ಮಾತ್ರ ಕೋಲಾರ ಮರುಭೂಮಿ ಆಗುವುದು ತಪ್ಪುತ್ತದೆ.
ಟ ಜಾನಪದ ಸಾಹಿತ್ಯದ ಮೂಲಕ ಜನರ ಬದುಕಿಗೆ ಏನಾದರೂ ಮಾರ್ಗೋಪಾಯ ಉಂಟೇ?
- ಖಂಡಿತ. ಯಾರು ಜಾನಪದಕ್ಕೆ ಬೆಲೆ ನೀಡುತ್ತಾರೋ ಅಲ್ಲಿ ನೆಮ್ಮದಿಯ ಸುಖ, ಸಂತೋಷ ಉಂಟು. ನಮ್ಮ ಜೀವನ ಶೈಲಿ, ಬದುಕು ಅವಲಂಬಿತವಾಗಿರುವುದೇ ಜಾನಪದದಿಂದ. ನಾನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷನಾದ ಮೇಲೆ ಜನರ ಬದುಕಿಗೆ ಅಡಾಡೆಮಿ ಹತ್ತರವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಬಯಸಿದ್ದೇನೆ.
ಟ ನಿಮ್ಮ ಕಾರ್ಯಕ್ರಮಗಳು ಏನು?
- ಜಾನಪದ ಅಕಾಡೆಮಿಯಿಂದ ಕಲಾವಿದರ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯಿಂದಲೇ ಈ ಪ್ರಾಯೋಗಿಕ ಸಂಶೋಧನೆ ಆರಂಭಿಸಲಾಗುತ್ತಿದೆ. ಇಂದು ಜಾನಪದ ಕ್ಷೇತ್ರದಲ್ಲೂ ನಕಲಿ, ಡೊಂಗೀ ಕಲಾವಿದರು ಹೆಚ್ಚಾಗಿದ್ದಾರೆ. ಇದರಿಂದ ಅಸಲಿ ಕಲಾವಿದರಿಗೆ ಮನ್ನಣೆ ಸಿಗದಂತಾಗುತ್ತಿದೆ. ಜಾನಪದ ಕಲೆ ರಾಮಾಯಣ, ಮಹಾಭಾರತ ಕಾಲದಲ್ಲಿಯೂ ಇತ್ತು. ಹಗಲು ವೇಷಧಾರಿಗಳು ನಮ್ಮ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದರು.
ಈಗ ಹಗಲು ವೇಷ ಭಿಕ್ಷಾಟನೆಗೆ ದಾರಿಯಾಗಿದೆ. ಮನರಂಜನೆಯ ವಸ್ತುವಾಗಿದೆ. ಇದರಿಂದ ಮೂಲ ಜಾನಪದಕ್ಕೆ ಹೊಡೆತ ಬಿದ್ದಿರುವುದರಿಂದ ಅಕಾಡೆಮಿಯ ಮೂಲಕ ಮೇಜರ್ ಸರ್ಜರಿ ಮಾಡಿ ಜಾನಪದವನ್ನು ಜನಪದವನ್ನಾಗಿಸಲು ಉದ್ದೇಶಿಸಲಾಗಿದೆ.
ಟ ಭಾಷಣ ಮಾಡುತ್ತೀರೋ ಇಲ್ಲವೇ ಹಾಡು ಹೇಳುತ್ತೀರೋ?
- ಹಾಡು ಇಲ್ಲದೆ ನನಗೆ ಬದುಕಿಲ್ಲ,ಕೊಂಚ ಮಾತುಗಳು ಹೆಚ್ಚಿನ ಹಾಡುಗಳ ಮೂಲಕ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು, ಕನ್ನಡ ಸಾಹಿತ್ಯಾಭಿಮಾನಿಗಳ ಹೃದಯ ಗೆಲ್ಲುವ ಕೆಲಸ ಮಾಡುವ ವಿಶ್ವಾಸವಿದೆ. ಜನರ ಬದುಕಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಬಂಗಾರಪೇಟೆ ತಾಲೂಕು ಸಾಹಿತ್ಯ ಸಮ್ಮೇಳನ ಪರಿಣಾಮಕಾರಿ ನಡೆಯಬೇಕೆಂಬ ಆಸೆಯಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com