-ಸುಭಾಶ್ಚಂದ್ರ ವಾಗ್ಳೆ
ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮೂರು ಹಿಂದೂ ರುದ್ರಭೂಮಿಗಳಿವೆ. ಅವುಗಳಲ್ಲಿ ನಗರದ ಬೀಡಿನಗುಡ್ಡೆಯಲ್ಲಿರುವ ರುದ್ರಭೂಮಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮಲ್ಪೆ ಮತ್ತು ಇಂದ್ರಾಳಿಯಲ್ಲಿರುವ ರುದ್ರಭೂಮಿಗಳು ಬಾಗಿಲು ಹಾಕಿ 5 ವರ್ಷಗಳೇ ಕಳೆದಿವೆ.
ಆದ್ದರಿಂದ ಮಲ್ಪೆ ರುದ್ರಭೂಮಿ ವ್ಯಾಪ್ತಿಯ ಮಲ್ಪೆ, ಕೊಡವೂರು, ಕಲ್ಯಾಣಪುರ ಪ್ರದೇಶಗಳಲ್ಲಿ ಯಾರಾದರೂ ಸತ್ತರೆ ಶವವನ್ನು ಐದಾರು ಕಿ.ಮೀ. ದೂರದಲ್ಲಿರುವ ಬೀಡಿನಗುಡ್ಡೆಗೆ ತರಬೇಕು. ಇಂದ್ರಾಳಿ ರುದ್ರಭೂಮಿಯನ್ನು ಅವಲಂಬಿಸಿರುವ ಮಣಿಪಾಲ, ಪರ್ಕಳ, ಹೆರ್ಗ, ಆತ್ರಾಡಿ, ಬಡಗುಬೆಟ್ಟು ಇತ್ಯಾದಿ ಕಡೆಗಳಲ್ಲಿ ಸತ್ತವರನ್ನು ಏಳೆಂಟು ಕಿ.ಮೀ. ದೂರದ ಬೀಡಿನಗುಡ್ಡೆಗೆ ತರಬೇಕು.
6 ಶವಗಳನ್ನು ಏಕಕಾಲದಲ್ಲಿ ಅಂತ್ಯ ಸಂಸ್ಕಾರ, ದಹನ ಮಾಡುವುದಕ್ಕೆ ಬೇಕಾದ ವ್ಯವಸ್ಥೆಗಳಿರುವ ಬೀಡಿನಗುಡ್ಡೆಯಲ್ಲಿರುವ ರುದ್ರಭೂಮಿ ಸುಸಜ್ಜಿತವಾಗಿದೆ. ಆದರೆ, ತಲಾ 2 ಶವಗಳ ದಹನಕ್ಕೆ ಅವಕಾಶ ಇರುವ ಇಂದ್ರಾಳಿ ಮತ್ತು ಮಲ್ಪೆ ರುದ್ರಭೂಮಿಯನ್ನು ನಗರಸಭೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯದಿಂದಲೇ ಪಾಳು ಬಿದ್ದಿದೆ. ಮಲ್ಪೆ ರುದ್ರಭೂಮಿಯಲ್ಲಿ ಸ್ಥಳವಾಕಾಶ ಕಡಿಮೆ ಇದೆ. ಆದ್ದರಿಂದ ಈ ರುದ್ರಭೂಮಿಯಲ್ಲಿ ಶವದಹನದ ಛೇಂಬರ್ಗಳ ಸಂಖ್ಯೆ ಹೆಚ್ಚಿಸಲಾಗದಿದ್ದರೂ, ಇರುವ ಚೇಂಬರ್ಗಳನ್ನು ಸುಸಜ್ಜಿತಗೊಳಿಸಿ, ಪುನರಜ್ಜೀವನಗೊಳಿಸುವುದು ಮಲ್ಪೆಯ ಜನಸಂಖ್ಯೆಯ ಪ್ರಮಾಣಕ್ಕೆ ಅತ್ಯವಶ್ಯಕ.
ಶವದಹನ ಚೇಂಬರ್ಗಳನ್ನು ಹೆಚ್ಚಿಸಿ: ಇಂದ್ರಾಳಿ ರುದ್ರಭೂಮಿ ಸಾಕಷ್ಟು ವಿಶಾಲವಾಗಿದೆ. ಉಡುಪಿ-ಮಣಿಪಾಲ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವುದರಿಂದ ಶವ, ಕಟ್ಟಿಗೆ ಇತ್ಯಾದಿ ಸಾಗಾಟಕ್ಕೂ ಅನುಕೂಲಕರವಾಗಿದೆ. ಈ ರುದ್ರಭೂಮಿಯ ವ್ಯಾಪ್ತಿಯೂ ಬಹಳ ದೊಡ್ಡದಾಗಿರುವುದರಿಂದ ಈ ರುದ್ರಭೂಮಿಯನ್ನು ಪುನರುಜ್ಜೀವನಗೊಳಿಸುವುದರೊಂದಿಗೆ ಶವ ದಹನ ಛೇಂಬರ್ಗಳನ್ನು ಹೆಚ್ಚಿಸಬೇಕಾಗಿದೆ. ಇಲ್ಲಿಯೂ 6 ಛೇಂಬರ್ಗಳನ್ನು ನಿರ್ಮಿಸಿದರೇ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯ ನಿವಾಸಿ ಕೃಷ್ಣ ಭಟ್ ಅಭಿಪ್ರಾಯ.
ಇನ್ನಾದರೂ ನಗರಸಭೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಮತ್ತು ದಶಕಗಳ ಕಾಲ ಊರ್ಜಿತದಲ್ಲಿದ್ದ ಈ 2 ರುದ್ರಭೂಮಿಗಳನ್ನು ಪುನರುಜ್ಜೀವನಗೊಳಿಸಬೇಕು.
ಅಭಿವೃದ್ಧಿ ಹೊಣೆ ಹೊರುವವರಾರು?
ಇಂದ್ರಾಳಿ ರುದ್ರಭೂಮಿಯು ಪಾಳು ಬಿದ್ದಿರುವ ಬಗ್ಗೆ ಜಿಲ್ಲಾಡಳಿದ ಅಧಿಕಾರಿಗಳನ್ನು ಕೇಳಿದರೆ, ನಗರಸಭೆಯನ್ನು ತೋರಿಸುತ್ತಾರೆ. ನಗರಸಭೆಯ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಡಳಿತವನ್ನು ತೋರಿಸುತ್ತಾರೆ. ಈ ನಡುವೆ ಇಂದ್ರಾಳಿ ರುದ್ರಭೂಮಿಯನ್ನು ನಗರಸಭೆಗಾಗಲಿ, ಜಿಲ್ಲಾಡಳಿತಕ್ಕಾಗಲಿ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿ, ಅವರಿಗೆ ತಾವೇ ವೇತನ ನೀಡಿ, ತನ್ನ ಹೆತ್ತವರ ನೆನಪಿನಲ್ಲಿ ನಿರ್ವಹಿಸಲು ಉಡುಪಿಯ ಹೊಟೇಲ್ ಉದ್ಯಮಿ ವಿಶ್ವನಾಥ ಶೆಣೈ ಮುಂದೆ ಬಂದಿದ್ದಾರೆ. ಈ ಬಗ್ಗೆ ಲಿಖಿತವಾಗಿಯೂ ಜಿಲ್ಲಾಧಿಕಾರಿಗೆ, ನಗರಸಭೆಗೆ ಮನವಿ ಮಾಡಿದ್ದರೂ ಅವರಿಂದ ಧನಾತ್ಮಕ ಉತ್ತರ ಸಿಕ್ಕಿಲ್ಲ.
Advertisement