ಕೋಟ: ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಶಿಷ್ಟಾಚಾರವನ್ನು ಪಾಲಿಸದೇ ನಾಡ ಕಚೇರಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ವಿತರಿಸಿದ ಸಚಿವರನ್ನೇ ಕೋಟ ಗ್ರಾ.ಪಂ. ಅಧ್ಯಕ್ಷ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಭಾನುವಾರ ಇಲ್ಲಿನ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿ, ಈ ಬಾರಿಯ ಮುಂಗಾರು ಮಳೆಯಿಂದ ತೊಂದರೆಗೊಳಗಾದವರಿಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರ ವಿತರಿಸಿದರು.
ಪ್ರಥಮ ಬಾರಿಗೆ, ಸೂಚನೆ ನೀಡದೆ ನಾಡಕಚೇರಿಗೆ ಸಚಿವರ ದಿಢೀರ್ ಭೇಟಿಯಿಂದ ತಬ್ಬಿಬಾದ ಪಂಚಾಯ್ತಿ ಅಧ್ಯಕ್ಷ ಎಂ. ಶಿವ ಪೂಜಾರಿ ಹಾಗೂ ಸ್ಥಳೀಯ ಕೋಟ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ನಡುವೆ ಸಭೆ ಮುಗಿದ ನಂತರ ನಾಡಕಚೇರಿ ಹೊರಗೆ ವಾಗ್ವಾದ ನಡೆಯಿತು.
ಸಚಿವರ ಭೇಟಿ ನಾವು ನಿರೀಕ್ಷಿಸಿರಲಿಲ್ಲ, ಆದ್ದರಿಂದ ಗ್ರಾ.ಪಂ.ನ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಕನಿಷ್ಠ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಚಿತವಾಗಿ ಗ್ರಾಪಂ.ಗೆ ಮಾಹಿತಿ ನೀಡಬೇಕಾಗಿತ್ತು ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಮಾತ್ರವಲ್ಲ ಗ್ರಾ.ಪಂ. ಅಧ್ಯಕ್ಷರು ಅಲ್ಲಿದ್ದ ಸಚಿವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಇದು ಪ್ರಕೃತಿ ವಿಕೋಪ ಪರಿಹಾರ ವಿತರಣೆ ಸರ್ಕಾರಿ ಕಾರ್ಯಕ್ರಮವಾದ್ದರಿಂದ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಬಂದಿರುವುದು ಸರಿಯಲ್ಲ, ಸಚಿವರಿಂದಲೇ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದರು.
ಅಲ್ಲಿನ ಸ್ಥಳೀಯ ಸಮಸ್ಯೆಗಳಾದ ರೇಶನ್ ಕಾರ್ಡ್ವಿತರಣೆ, ಬಸವ ಜಯಂತಿ ಮನೆ ಮಂಜೂರಾತಿ, ಇನ್ನಿತರ ಕಾರ್ಯಗಳು ಆಮೆಗತಿಯಲ್ಲಿ ನಡೆಯುತ್ತಿವೆ, ಈ ಬಗ್ಗೆ ಸಚಿವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪರಿಹಾರ ವಿತರಣೆ ತುರ್ತು ಕಾರ್ಯಕ್ರಮವಾದ್ದರಿಂದ ತುರ್ತಾಗಿ ಬರಬೇಕಾಯಿತು. ಇನ್ನೂಮ್ಮೆ ಕೋಟ ಪರಿಸರಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು ಸಚಿವರು ಆಶ್ವಾಸನೆ ನೀಡಿ ಗ್ರಾ.ಪಂ. ಅಧ್ಯಕ್ಷರನ್ನು ಸಮಾಧಾನಪಡಿಸಿದರು.
ಬ್ರಹ್ಮವಾರ ವಿಶೇಷ ತಹಸೀಲ್ದಾರ್ ತಿಪ್ಪೆಸ್ವಾಮಿ, ಕುಂದಾಪುರ ಉಪವಿಭಾಗಾಧಿಕಾರಿ ಯೋಗೇಶ್ವರ್, ಕಂದಾಯ ನಿರೀಕ್ಷಕ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದರು.
Advertisement