ಮಹಾದೇವ ಗೋವಿಂದ ರಾನಡೆಯವರು ಸಮಾಜ ಸೇವಕರಾಗಿ, ಲೇಖಕರಾಗಿ ಮತ್ತು ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಪ್ರಾರ್ಥನಾ ಸಮಾಜ, ಪೂನಾ ಸಾರ್ವಜಿನಕ ಸಭಾದ ಸ್ಥಾಪಕರಾಗಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. 'ಇಂದು ಪ್ರಕಾಶ್' ಪತ್ರಿಕೆಯ ಸಂಪಾದಕರಾಗಿ ಅದನ್ನು ಕೆಲಕಾಲ ಮುನ್ನಡೆಸಿದರು. ಒಮ್ಮೆ 1885 ರಲ್ಲಿ ಪೂನಾದ ಒಂದು ಶಾಲಾ ಕಾರ್ಯಕ್ರಮಕ್ಕೆ ರಾನಡೆಯವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಪೋಷಕರು ಮತ್ತು ಸಾರ್ವಜನಿಕರು ಬರುತ್ತಿದ್ದುದರಿಂದ ಆಹ್ವಾನಪತ್ರಿಕೆ ಇದ್ದವರಿಗೆ ಮಾತ್ರ ಒಳಬಿಡಲಾಗುತ್ತಿತ್ತು. ಅದಕ್ಕಾಗಿ ದ್ವಾರದ ಬಳಿ ಒಬ್ಬ ಸ್ವಯಂ ಸೇವಕನನ್ನು ನೇಮಿಸಲಾಗಿತ್ತು. ರಾನಡೆಯವರು ಪ್ರವೇಶದ್ವಾರದ ಬಳಿಬಂದಾಗ ಆ ಸ್ವಯಂ ಸೇವಕ ಅವರನ್ನೂ ಆಹ್ವಾನ ಪತ್ರಿಕೆ ತೋರಿಸಲು ವಿನಂತಿಸಿದ. ಆದರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರಿಂದ ಆಹ್ವಾನಪತ್ರಿಕೆ ತಂದಿರಲಿಲ್ಲ. ಈ ವಿಚಾರವನ್ನು ಸ್ವಯಂ ಸೇವಕನಿಗೆ ತಿಳಿಸಿದರೂ ಸಹ 'ದಯಮಾಡಿ ಕ್ಷಮಿಸಿರಿ, ನಾನು ಆಹ್ವಾನ ಪತ್ರಿಕೆ ಇಲ್ಲದೆ ಯಾರನ್ನೂ ಒಳ ಬಿಡಲು ಸಾಧ್ಯವಿಲ್ಲ' ಎಂದು ತಡೆದು ನಿಲ್ಲಿಸಿದ. ಅಷ್ಟರಲ್ಲಿ ರಾನಡೆಯವರನ್ನು ಸ್ವಾಗತಿಸಲು ಬಂದ ಶಾಲೆಯವರು ರಾನಡೆಯವರು ಪ್ರವೇಶದ್ವಾರದ ಹೊರಗೇ ನಿಂತಿರುವುದನ್ನು ಗಮನಿಸಿ ಧಾವಿಸಿ ಬಂದರು. ವೇದಿಕೆಗೆ ಕರೆದೊಯ್ಯಲು ಉತ್ಸುಕರಾದರು. ಆದರೆ ಆ ಸ್ವಯಂ ಸೇವಕ, ಸ್ವಾಗತ ಸಮಿತಿಯವರು ವಿಧಿಸಿದ್ಧ ನಿಯಮವನ್ನು ಅವರೇ ಪರಿಪಾಲಿಸದೆ, ಆಹ್ವಾನ ಪತ್ರಿಕೆಯಿಲ್ಲದೆ ಕರೆದೊಯ್ಯುವ ಕ್ರಮವನ್ನು ವಿರೋಧಿಸಿದ. ಹಾಗೂ ತನ್ನ ಕರ್ತವ್ಯ ಪಾಲನೆಗೆ ಅಡ್ಡಿಯುಂಟು ಮಾಡುವುದನ್ನು ಪ್ರತಿಭಟಿಸಿದ. ಅವನನ್ನು ಅಪಾದ ಮಸ್ತಕ ನೋಡಿದ ರಾನಡೆಯವರು ಅವನ ಕರ್ತವ್ಯ ನಿಷ್ಠೆಗೆ ತಲೆದೂಗಿ ಅವನ ಬೆನ್ನು ತಟ್ಟಿ ಅಭಿನಂದಿಸಿದರು. ಅಷ್ಟರಲ್ಲಿ ಸ್ವಾಗತ ಸಮಿತಿಯ ಸದಸ್ಯರೊಬ್ಬರು ಆಹ್ವಾನ ಪತ್ರಿಕೆಯೊಂದನ್ನು ರಾನಡೆಯವರ ಪರವಾಗಿ ನೀಡಿ ಅವರನ್ನು ಗೌರವ ಪೂರ್ವಕವಾಗಿ ಒಳಗೆ ಕರೆದೊಯ್ದರು. ಹೀಗೆ ರಾನಡೆಯವರನ್ನೇ ದ್ವಾರದ ಬಾಗಿಲಲ್ಲಿ ನಿಲ್ಲಿಸಿದ ಸ್ವಯಂ ಸೇವಕ ಬೇರಾರೂ ಆಗಿರದೆ, ಗೋಪಾಲಕೃಷ್ಣ ಗೋಖಲೆಯವರಾಗಿದ್ದರು. ಇಂತಹ ಶಿಸ್ತುಬದ್ಧ ಜೀವನ ಮತ್ತು ಬದ್ಧತೆಯಿಂದಾಗಿಯೇ ಗೋಖಲೆ ಮುಂದೆ ಸ್ವಾತಂತ್ರ್ಯ ಸಂಗ್ರಾಮದ ರೂವಾರಿಯಾಗಿ, ಮಹಾತ್ಮ ಗಾಂಧಿಯವರ ರಾಜಕೀಯ ಗುರುವಾಗಿ ಹೊರಹೊಮ್ಮಲು ಸಾಧ್ಯವಾಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Advertisement