ಮೊರಾರ್ಜಿಯವರ ಸರಳತೆ

ಮೊರಾರ್ಜಿ ದೇಸಾಯಿಯವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಅರ್ಥಸಚಿವರಾಗಿ, ಉಪಪ್ರಧಾನಿಯಾಗಿ, ಮುಂಬೈ ಪ್ರಾಂತದ ಮುಖ್ಯಮಂತ್ರಿಯಾಗಿ ಅಪಾರ ಅನುಭವ ಪಡೆದಿದ್ದರು. ಪಾಕಿಸ್ತಾನದಿಂದ ನಿಷಾನ್-ಇ-ಪಾಕಿಸ್ತಾನ್ ಪ್ರಶಸ್ತಿ ಪಡೆದು ಪ್ರಸಿದ್ಧರಾದವರು. ಭಾರತದಲ್ಲಿ ಮೊದಲ ಕಾಂಗ್ರಸ್ಸೇತರ ಸರ್ಕಾರ ರಚಿಸಿದ್ದು ಇವರ ಸಾಧನೆಯಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕತೆ, ಸರಳತೆ ಮತ್ತು ದಕ್ಷತೆಗೆ ಹೆಸರಾಗಿದ್ದರು. ಅನಾವಶ್ಯಕವಾಗಿ ಹಣವನ್ನೆಂದೂ ವೆಚ್ಚ ಮಾಡುತ್ತಿರಲಿಲ್ಲ. 1937 ರಲ್ಲಿ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷ ಮುಂಬೈಯಲ್ಲಿ ಬಹುಮತ ಪಡೆದು ತನ್ನ ಸರ್ಕಾರ ರಚಿಸಿತು. ಆಗ ಬಿ.ಜಿ.ಖೇರ್ ಅಲ್ಲಿ ಮುಖ್ಯ(ಪ್ರಧಾನ) ಮಂತ್ರಿಗಳಾದರು. ಆಗ ಸಚಿವರಿಗೆ ತಿಂಗಳಿಗೆ 500 ರು. ವೇತನ ನೀಡುವ ಪರಿಪಾಠವಿತ್ತು. ಖೇರರ ಸಂಪುಟದಲ್ಲಿ ಮೊರಾರ್ಜಿಯವರೂ ಸಹ ಮಂತ್ರಿಗಳಾಗಿದ್ದರು. ಶಿಸ್ತು ಮತ್ತು ಸರಳತೆಯ ಸಾಕಾರ ಮೂರ್ತಿಯಾಗಿದ್ದ ಮೊರಾರ್ಜಿಯವರು ಐದುನೂರಕ್ಕಿಂತ ಕಡಿಮೆ ವೇತನ ಪಡೆಯಬೇಕೆಂದು ಗಾಂಧೀಜಿಯವರು ಸೂಚಿಸಿದರು. ತನ್ನ ಸಹೋದ್ಯೋಗಿಗಳು ಐದುನೂರಕ್ಕಿಂತ ಹೆಚ್ಚು ಖರ್ಚು ಮಾಡುವವರಾದ್ದರಿಂದ ಅವರು ಕಡಿಮೆ ವೇತನ ಪಡೆದರೆ ತೊಂದರೆಯಾಗುತ್ತದೆ. ಆದರೆ ತಾವೊಬ್ಬರು ಮಾತ್ರ ಕಡಿಮೆ ಸಂಬಳ ಪಡೆದರೆ ಇತರರಿಂದ ಟೀಕೆಗೆ ಒಳಪಡಬೇಕಾಗುತ್ತದೆ. ಅದು ಸರಿಯಲ್ಲವಾದ್ದರಿಂದ ಎಷ್ಟು ಹಣ ತಾನು ಉಳಿಸಿದ್ದೇನೆಯೋ ಮತ್ತು ಮುಂದೆ ಉಳಿಸುತ್ತೇನೆಯೋ ಅದೆಲ್ಲವನ್ನೂ ತಮ್ಮಮಕ್ಕಳಿಗೆ ಕೊಡುವುದಿಲ್ಲ. ಬದಲಾಗಿ ಸಾರ್ವಜನಿಕ ಧರ್ಮಕಾರ್ಯಗಳಿಗೆ ವಿನಿಯೋಗಿಸಲು ಅನುವಾಗುವಂತೆ ಒಂದು ಟ್ರಸ್ಟ್ ರಚಿಸಿ, ಅದಕ್ಕೆ ನೀಡುತ್ತೇನೆ ಎಂದು ಹೇಳಿದರು. ಅದರಂತೆ ಒಂದು ಟ್ಟಸ್ಟ್ ರಚಿಸಿ, ತಾವು ಉಳಿಸಿದ ಎಲ್ಲ ಹಣವನ್ನೂ ಅದಕ್ಕೆ ನೀಡಿದರು. ಅದರಿಂದ ಅನೇಕ ಸಾಮಾಜಿಕ ಕಾರ್ಯಗಳು ನಡೆಯುವಂತಾಯಿತು. ಅದನ್ನು ಗಾಂಧೀಜಿಯವರೂ ಒಪ್ಪಿದರು. ಹೀಗೆ ತಮ್ಮ ಸರಳ ಜೀವನದಿಂದ ಅನೇಕರಿಗೆ ಮೊರಾರ್ಜಿ ನೆರವಾದದ್ದು ಬೇರೆಯವರಿಗೆ ಮೇಲ್ಪಂಕ್ತಿ ಎಂದರೆ ತಪ್ಪಲ್ಲ. 


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com