ದರ್ಭಾಂಗ: ಪ್ರಾದೇಶಿಕ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇವಲ 40, 20 ಹಾಗೂ ಕರ್ನಾಟಕದಲ್ಲಿ ಬರೀ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ(ಜೆಡಿಎಸ್)ವರು ಸಹ ದೇಶದ ಪ್ರಧಾನಿಯಾಗಲು ಕ್ಯೂ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಉತ್ತರ ಬಿಹಾರದ ದರ್ಭಾಂಗನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 40, 20, 8 ಸೀಟುಗಳಲ್ಲಿ ಸ್ಪರ್ಧಿಸುವ ಈ ಜನರಿಂದ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವೆ? ಆದರೆ ನಿಮ್ಮ ಚೌಕಿದಾರ್ ಉಗ್ರರ ವಿರುದ್ಧ ಹೋರಾಡುತ್ತಾರೆ. ಅದಕ್ಕೆ ನಿಮ್ಮ ಮತದ ಬೆಂಬಲ ಬೇಕು ಎಂದರು.
ನೀವು ದೇಶದ ಯಾವುದೇ ಭಾಗದಲ್ಲಿ ಬಿಜೆಪಿ ಅಥವಾ ಅದರ ಮಿತ್ರ ಪಕ್ಷಕ್ಕೆ ಮತ ಹಾಕಿದರೆ ಅದು ನೇರವಾಗಿ ಚೌಕಿದಾರನಿಗೆ ಹೋಗುತ್ತದೆ ಎಂದು ಪ್ರಧಾನಿ ಹೇಳಿದರು.
ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತುಹಾಕುವುದು ನಮ್ಮ ಉದ್ದೇಶ ಎಂದು ಬಿಜೆಪಿ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.