ಮಧ್ಯ ಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿದಿನ ಒಬ್ಬೊಬ್ಬ ಪ್ರಧಾನ ಮಂತ್ರಿ ನೋಡಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ರೇವಾ ಜಿಲ್ಲೆಯ ಗೋವಿಂದಗಢದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ನಾಯಕರು ಯಾರು ಎಂದು ಪ್ರತಿಪಕ್ಷಗಳನ್ನು ಕೇಳುತ್ತಿದ್ದೇನೆ . ಆದರೆ, ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದರು.
ಕೇಂದ್ರದಲ್ಲಿ ಪ್ರತಿಪಕ್ಷಗಳ ಸರ್ಕಾರ ರಚನೆಯಾದರೆ, ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಶರದ್ ಪವರ್, ಗುರುವಾರ ಹೆಚ್ ಡಿ ದೇವೇಗೌಡ , ಶುಕ್ರವಾರ ಚಂದ್ರಬಾಬು ನಾಯ್ಡು, ಶನಿವಾರ ಮಮತಾ ಬ್ಯಾನರ್ಜಿ ಪ್ರಧಾನಿಯಾಗಲಿದ್ದಾರೆ ಭಾನುವಾರ ದೇಶಾದ್ಯಂತ ರಜೆ ಇರಲಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ದೇಶ ಹೀಗೆ ನಡೆಯಬೇಕಾ? ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಯಾಗಬೇಕಾಗಿದ್ದು, ದೇಶಕ್ಕೆ ಸದೃಢ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಬಡವರಿಗಾಗಿ ಏನು ಸಹಾಯ ಮಾಡಿಲ್ಲ, ಭಯೋತ್ಪಾದನೆ ವಿರುದ್ಧ ಯಾವುದೇ ಹೋರಾಟ ಮಾಡಿಲ್ಲ, ಪಾಕಿಸ್ತಾನಕ್ಕೆ ಒಂದೇ ಒಂದು ಪ್ರತ್ಯುತ್ತರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಪಾಕಿಸ್ತಾನ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದರು.
ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂಬ ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅವರ ಸಲಹೆಯನ್ನು ಪ್ರಸ್ತಾಪಿಸಿದ ಅಮಿತ್ ಶಾ, ಕಾಂಗ್ರೆಸ್ ಕೂಡಾ ಇದೇ ನಿಲುವು ಹೊಂದಿದೆ ಎಂದು ಆರೋಪಿಸಿದರು. ಆದರೆ, ಮೋದಿ ಸರ್ಕಾರ ಕಾಶ್ಮೀರವನ್ನು ಭಾರತದಿಂದ ಬೇರೆ ಮಾಡಲ್ಲ ಎಂದು ಅವರು ಹೇಳಿದರು
Advertisement