ನವದೆಹಲಿ: ನಾಳೆ ಲೋಕಸಭೆಯ 59 ಕ್ಷೇತ್ರಗಳಿಗೆ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಈ ಮಧ್ಯೆ ಚುನಾವಣಾ ಆಯೋಗ ದೇಶಾದ್ಯಂತ 3,439 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದು, ಇದು ಲೋಕಸಭೆ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ಎಂದು ತಿಳಿಸಿದೆ.
ಚುನಾವಣಾ ಆಯೋಗ ಇಂದು ಚುನಾವಣಾ ಪ್ರಚಾರದ ವೇಳೆ ಸಿಕ್ಕ ಅಕ್ರಮ ಹಣದ ಲೆಕ್ಕ ಬಿಡುಗಡೆ ಮಾಡಿದ್ದು, ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಒಂದು ಸಾವಿರದ ಇನ್ನೂರು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ಇದಾಗಿದೆ.
ಈ ವರ್ಷ ತಮಿಳುನಾಡಿನಲ್ಲಿ 950 ಕೋಟಿ ರೂಪಾಯಿ ಅಕ್ರಮ ಹಣ ಸಿಕ್ಕಿದ್ದರೆ, ಗುಜರಾತ್ ನಲ್ಲಿ 552 ಕೋಟಿ ರೂ, ದೆಹಲಿಯಲ್ಲಿ 426 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಈ ಮೂರು ರಾಜ್ಯಗಳು ಕ್ರಮವಾಗಿ ಒಂದು, ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಅಕ್ರಮ ಹಣ ಮಾತ್ರವಲ್ಲದೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾರ್ಚ್ 10ರಿಂದ ಇಲ್ಲಿಯವರೆಗೆ ಒಟ್ಟು 500 ದೂರುಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಆರು ದೂರುಗಳು ದಾಖಲಾಗಿದ್ದು, ಎಲ್ಲಾ ಪ್ರಕರಣದಲ್ಲೂ ಅವರು ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ.