ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಡುವಣ ನೇರ ಹಣಾಹಣಿ ಏರ್ಪಟ್ಟಿದ್ದು, ಪ್ರಚಾರದ ಅಖಾಡದಲ್ಲಿ ವಾಕ್ಸಮರ ತಾರಕ್ಕಕೇರಿದೆ.
ನಾಗಮಂಗಲದ ಬೆಳ್ಳೂರಿನಲ್ಲಿ ನಿನ್ನೆ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುತ್ತಿರುವ ನಟ ಯಶ್ ಮನೆ ಬಾಡಿಗೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಂಬರೀಷ್ ತಿರುಗೇಟು ನೀಡಿದ್ದಾರೆ.
ಯಶ್ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.ನಿಖಿಲ್ ಗೆ ಇನ್ನೂ ಚಿಕ್ಕ ವಯಸ್ಸು , ಅವರು ಮಾಡಿರುವುದು ಕೇವಲ 2 ಚಿತ್ರಗಳಷ್ಟೇ. ಅಂತಹವರು ಚಿತ್ರರಂಗದ ಹಿರಿಯ ನಟರ ಬಗ್ಗೆ ಗೌರವ ನೀಡುವುದನ್ನು ಕಲಿಯಬೇಕು, ಯಶ್ ನಿಖಿಲ್ ಬಗ್ಗೆ ಎಲ್ಲಿಯಾದರೂ ಮಾತನಾಡಿದ್ದಾರಾ? ಹಾಗಿದ್ದರೂ ಯಶ್ ಬಗ್ಗೆ ಹೇಳಿಕೆ ನಿಖಿಲ್ ಅಹಂಕಾರ ಸೂಚಿಸುತ್ತದೆ ಎಂದಿದ್ದಾರೆ.
ಇನ್ನೂ ಮುಂದಿನ ವಾರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ನಡೆಸುವ ಹುನ್ನಾರ ನಡೆಸಲಾಗಿದೆ. ಇದಕ್ಕಾಗಿ ತಮ್ಮ ಮನೆಯ ಕೆಲಸಗಾರರಿಗೆ 10 ರಿಂದ 15 ಲಕ್ಷ ಹಣ, ವಿದೇಶ ಪ್ರವಾಸ ಹಾಗೂ ಬೆಂಗಳೂರಿನ ನಿವೇಶನದ ಆಮಿಷ ವೊಡ್ಡಲಾಗಿದೆ. ಮನೆಯಲ್ಲಿ ಕೆಟ್ಟದಾಗಿ ನಡೆಯುತಿತ್ತು ಎಂದು ಬಿಂಬಿಸುವ ಹುನ್ನಾರ ನಡೆಸಲಾಗಿದೆ ಎಂದು ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.
Advertisement