ರಾಯಚೂರು: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ರಾಯಚೂರು ಮತ್ತು ಕಲಬುರಗಿಯಲ್ಲಿ ಮೋದಿ ಅಲೆ ಇದೆ ಎಂಬುದು ಕೇವಲ ಭ್ರಮೆಯಷ್ಟೇ ವಾಸ್ತವ ಬೇರೆಯೇ ಇದೆ ಎಂದು ಎಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈ ಭಾಗದಲ್ಲಿ
ಮೋದಿ ಅಲೆ ಇದೆ ಎಂಬುದನ್ನು ನಿರಾಕರಿಸುವ ಮೊಯ್ಲಿ, ಬೇರೆಯವರು ಈ ರೀತಿ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿಕೊಂಡು ಬಂದಿರುವ ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಗೆ ಮತ ನೀಡಲು ಮನಸ್ಸು ಬದಲಾಯಿಸಿದ್ದಾರೆ ಎನ್ನುವ ಮಾತುಗಳನ್ನು ಕೆಲವರು ಹೇಳುತ್ತಿದ್ದಾರೆ. ಆದರೆ, ಇಂತಹ ಮನೋಭಾವ ಮತದಾರರಲ್ಲಿ ಇಲ್ಲ, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲು ಜನ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಕ್ಕಲಿಗ ಮತಗಳು ಬಚ್ಚೇಗೌಡರಿಗೆ ಬೀಳಲಿವೆ ಎಂದು ಕೆಲ ರಾಜಕೀಯ ತಜ್ಞರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ವೀರಪ್ಪ ಮೊಹ್ಲಿ, ಅದನ್ನು ನಂಬುವುದಿಲ್ಲ, ಕಳೆದ ಬಾರಿ ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ವಿಜಯದ ಅಂತರ ಕಡಿಮೆಯಾಗಿತ್ತು. ಈ ಬಾರಿ ಹೆಚ್ ಡಿ ಕುಮಾರಸ್ವಾಮಿ ಇಲ್ಲದಿರುವುದರಿಂದ ಮತಗಳು ಚದುರಿಹೋಗುವ ಸಂಭವ ಇರುವುದಿಲ್ಲ, ಹೀಗಾಗಿ ಈ ಬಾರಿ ಗೆಲುವು ಸಾಧಿಸುವುದಾಗಿ ಹೇಳಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ ವಿಧಿ 371 (ಜೆ) ತಿದ್ದುಪಡಿ ವಿಶೇಷ ಸ್ಥಾನಮಾನ ಒದಗಿಸಲಾಗಿದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
Advertisement