ಕಲಬುರಗಿ: ಶಾಸಕ ಸ್ಥಾನದಿಂದ ಅನರ್ಹತೆಯಾದರೂ ತಾವು ಲೋಕಸಭಾ ಚುನಾವಣೆ ಸ್ಪರ್ಧಿಸುವುದು ಖಚಿತ ಎಂದು ಕಲಬುರಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಿದ್ದರಿಂದ ಕೆಲವರು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ರಾಜೀನಾಮೆ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ಗೆಲ್ಲಿಸಲು ನನ್ನ ಗುರುಗಳಾದ ಮಾಲಕರೆಡ್ಡಿ ಬಂದಿದ್ದು, ಮಾಲಕರೆಡ್ಡಿ ಬಿಜೆಪಿ ಸೇರ್ಪಡೆಯಿಂದ ಆನೆ ಬಲ ಬಂದಿದೆ. ಸ್ಪೀಕರ್ ರಮೇಶ್ ಕುಮಾರ್ ಒಳ್ಳೆಯ ವ್ಯಕ್ತಿಯಾಗಿದ್ದು, ಆದಷ್ಟು ಬೇಗ ರಾಜೀನಾಮೆ ಇತ್ಯರ್ಥ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಡಾ.ಉಮೇಶ್ ಜಾಧವ್, ಪಕ್ಷದ ಸಭೆ ಹಾಗೂ ಚರ್ಚೆಗಳಿಂದ ದೂರ ಉಳಿದ್ದರು. ಕಳೆದ ಮಾರ್ಚ್ 4ರಂದು ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದ ಜಾಧವ್ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುತಂತ್ರ ರಾಜಕಾರಿಣಿ ಅಲ್ಲ. ಅವರು ಕೂಡ ಒಳ್ಳೆಯವರಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ವ್ಯಕ್ತಿಯಾಗಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅವರು ಕುತಂತ್ರಿಯಾಗಿದ್ದರೆ ನನಗೆ ಏಳು ಪುಟಗಳ ನೋಟಿಸ್ ನೀಡುತ್ತಿರಲಿಲ್ಲ ಎಂದು ಜಾಧವ್ ಹೇಳಿದರು.