ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಅವರ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಕರೆ ನೀಡಿದ್ದಾರೆ.
ಇಂದು ನೆಲಮಂಗಲದಲ್ಲಿ ನಡೆದ ಬೃಹತ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಮೋದಿ ಕಳೆದ ಐದು ವರ್ಷಗಳಿಂದ ಏನೂ ಮಾಡಿಲ್ಲ. ಅವರು ಒಬ್ಬ ಮಾಹನ್ ಸುಳ್ಳುಗಾರ. ಹಲವಾರು ಭರವಸೆ ನೀಡಿ, ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಯಾವುದೇ ಭರವಸೆ ಈಡೇರಿಸಿಲ್ಲ ಎಂದರು.
ಪಕ್ಕದ ತಮಿಳುನಾಡಿನಿಂದ ರೈತರು ದೆಹಲಿಗೆ ತೆರಳಿ, ಅರೆ ಬೆತ್ತಲೆ ಮೆರವಣಿಗೆ ಮಾಡಿದಾಗ ಕಷ್ಟ ಕೇಳಲಿಲ್ಲ. ಆದರೆ ಕಿಸಾನ್ ಸಮ್ಮಾನ್ ಯೋಜನೆ ಅಂತ ಜಾರಿಗೆ ತಂದು ವರ್ಷಕ್ಕೆ ಆರು ಸಾವಿರ ರುಪಾಯಿ ನೀಡುವ ಕಾರ್ಯಕ್ರಮ ಜಾರಿಗೆ ತಂದರು. ಈ ಯೋಜನೆಗೆ ಕರ್ನಾಟಕದಿಂದ 10 ಲಕ್ಷ ರೈತರ ಪಟ್ಟಿ ಕಳುಹಿಸಲಾಗಿತ್ತು. ಆದರೆ ಹದಿನೇಳು ಕುಟುಂಬಕ್ಕೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆ ಹಣ ಸಿಕ್ಕಿದೆ ಎಂದರು.
ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಮೋದಿ ಸುಳ್ಳು ಹೇಳಿದರು. ಆದರೆ ಹದಿನೈದು ಲಕ್ಷ ಕುಟುಂಬಗಳ ಸಾಲ ಮನ್ನಾ ಆಗಿದೆ ಎಂದು ಕುಮಾರಸ್ವಾಮಿ ಮೋದಿಗೆ ತಿರುಗೇಟು ನೀಡಿದರು.