-ರಾಜೀವ ಹೆಗಡೆ
ಬೆಂಗಳೂರು: ಮೋದಿ ಜಪ, ಅಟಲ್ ನೆನಪು, ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ, ಸಿದ್ದು ಸರ್ಕಾರದ ವಿರುದ್ಧ ಆಕ್ರೋಶ, ನಾಳೆಯ ಕನಸಿನ ಉದ್ಘೋಷ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಪ್ರಚಾರ ವೈಖರಿ ಇದು. ತಮ್ಮ ಹಾಸ್ಯದ ಮಾತು, ಕೊಂಕು ನುಡಿ ಮೂಲಕ ವಿರೋಧಿಗಳನ್ನು ಟೀಕಿಸುವುದನ್ನು ಪ್ರಚಾರದಲ್ಲಿ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಡೀವಿ, ತಮ್ಮ ಅಧಿಕಾರವಧಿ ಸಾಧನೆಯನ್ನು ಬಂಡವಾಳನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.
ಸೋಮವಾರ ಬೆಳಗ್ಗೆ 6.30ಕ್ಕೆ ಪ್ರಚಾರ ಆರಂಭಿಸಿದ ಸದಾನಂದಗೌಡರು ರಾತ್ರಿ 9ರವರೆಗೂ ನಿರಂತರ ಪ್ರಚಾರ ಮಾಡಿದರು. ಕ್ಷೇತ್ರದ ಹತ್ತಾರು ಹಳ್ಳಿಗಳಿಗೆ ತೆರೆದ ಜೀಪಿನಲ್ಲಿ ನಿಂತು ಮತಯಾಚನೆ ಮಾಡಿದರು.
ಬ್ರೇಕ್ಫಾಸ್ಟ್ನಿಂದ ಡಿನ್ನರ್ವರೆಗೆ: ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಜತೆಗೂಡಿ ಸ್ಯಾಂಕಿ ಕೆರೆ ಉದ್ಯಾನದಿಂದ ಬೆಳಗ್ಗೆ 6.30ಕ್ಕೆ ಪ್ರಚಾರ ಆರಂಭಿಸಿದರು. ಜಾಗಿಂಗ್ ಬಂದಿದ್ದವರಲ್ಲಿ ಮತಯಾಚನೆ ಮಾಡಿದರು. ಪಕ್ಕದ ವೈಯಾಲಿಕಾವಲ್ ನಲ್ಲಿ ರೋಡ್ಶೋ ನಡೆಸಿದ ಡೀವಿ ದಲಿತರ ಕಾಲನಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿದರು. ಕಾಂಗ್ರೆಸ್ನ ಅಹಿಂದ ಆಡಳಿತ ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಕಚೇರಿಯಲ್ಲಿ ಹತ್ತು ಗಂಟೆಗೆ ತಿಂಡಿ ತಿಂದು ಮತ್ತೆ ಮಲ್ಲೇಶ್ವರ ಕಾಡುಮಲ್ಲೇಶ್ವರ ವಾರ್ಡ್ನತ್ತ ರೋಡ್ಶೋಗೆ ಹೊರಟರು. ಯಶವಂತಪುರ, ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ರೋಡ್ಶೋ ನಡೆಸಿದರು.
ಊಟ ಮರೆಸಿದ ಮತ ಹಸಿವು...
ಬಿರು ಬಿಸಿಲಿನ ಮಧ್ಯೆ ಬೆಂಗಳೂರು ಉತ್ತರ ಕ್ಷೇತ್ರದ ಹಳ್ಳಿಗಳತ್ತ ಮುಖ ಮಾಡಿದ ಸದಾನಂದಗೌಡ ಸತತ 3 ಗಂಟೆ ಪ್ರಚಾರ ನಡೆಸಿದರು. ಯಶವಂತಪುರ ಕ್ಷೇತ್ರದ ಹಳ್ಳಿಗಳಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅಭಿವೃದ್ಧಿ ಕೆಲಸ ನೆನಪಿಸಿ ಮತ ಯಾಚಿಸಿದರೆ, ಮೋದಿಯನ್ನು ಪ್ರಧಾನಿ ಮಾಡಲು ನಿಮ್ಮ ಮತ ಅನಿವಾರ್ಯ ಎಂದರು. ಗುಜರಾತ್ ಮಾದರಿ ಬಗ್ಗೆ ಭಾಷಣ ಮಾಡಿ ಜನರು ತಲೆದೂಗುವಂತೆ ಮಾಡಿದರು. ಪ್ರತಿ ಹಳ್ಳಿಯಲ್ಲೂ ಒಂದಿಬ್ಬರು ಸ್ಥಳೀಯ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುತ್ತಿರುವುದು ಗೌಡರ ಉತ್ಸಾಹ ಹೆಚ್ಚಿಸಿತ್ತು.
ಎಲ್ಲದಕ್ಕೂ ಮೋದಿ ಉತ್ತರ, ಸಕಾಲದ ನೆನಪು
ಕ್ಷೇತ್ರದ ಪ್ರತಿ ಸಮಸ್ಯೆಗೆ ಮೋದಿ ಅಭಿವೃದ್ಧಿ ಮಂತ್ರವೇ ಉತ್ತರ ಎನ್ನುವುದು ಸದಾನಂದಗೌಡರ ಅಭಿಪ್ರಾಯವಾಗಿತ್ತು. ಕಾಂಗ್ರೆಸ್ಗೆ 60 ವರ್ಷ ಆಡಳಿತ ನೀಡಿದ್ದೀರಿ. ಅಟಲ್ ಬಿಹಾರಿ ವಾಜಪೇಯಿ ಕೈಗೆ 6 ವರ್ಷ ಆಡಳಿತ ನೀಡಿ ದೇಶದ ಅಭಿವೃದ್ಧಿ ಪಥ ಬದಲಾಗಿದ್ದನ್ನು ಗಮನಿಸಿದ್ದೀರಿ. ಈಗ 60 ತಿಂಗಳು ಮೋದಿ ಕೈಗೆ ದೇಶದ ಚುಕ್ಕಾಣಿ ನೀಡಿ ಎಂದು ಡೀವಿ ಪ್ರತಿ ಕ್ಷೇತ್ರದಲ್ಲೂ ಹೇಳಿದರು. ಇನ್ನು ತಮಗೆ ಯಾಕೆ ಮತ ನೀಡಬೇಕು ಎಂಬುದಕ್ಕೆ ಮುಖ್ಯಮಂತ್ರಿಯಾದಾಗಿನ 11 ತಿಂಗಳಿನ ಆಡಳಿತವನ್ನು ಉದಾಹರಣೆಯಾಗಿ ನೀಡಿದರು. ಇದರ ಜತೆಗೆ ಸಕಾಲದಂತಹ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರಿ ಸೇವೆಗಳನ್ನು ಜನರ ಹಕ್ಕನ್ನಾಗಿ ಪರಿವರ್ತಿಸಿದ್ದೇನೆ ಎಂದು ಸಮಜಾಯಿಷಿ ನೀಡಿದರು.
Advertisement