
ನವದೆಹಲಿ: ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜಯದ ರೂವಾರಿ ನರೇಂದ್ರ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಸೇರಿದಂತೆ ಹಲವು ನಾಯಕರು ಅಭಿನಂದಿಸಿದ್ದಾರೆ.
ಆದರೆ, ನರೇಂದ್ರಮೋದಿ ಅವರು ವಿಜಯಯಾತ್ರೆಯಲ್ಲಿ ಪಾಲ್ಗೊಂಡು ಮತ್ತು ವಾರಣಾಸಿಗೆ ತೆರಳಿದ್ದರಿಂದ ರಾಜ್ಯದ ನಾಯಕರ ಜತೆ ಮಾತುಕತೆ ನಡೆಸಲಾಗಿಲ್ಲ. ರಾಜ್ಯದ ನಾಯಕರು ನೀಡಿದ ಹೂಗುಚ್ಛ ಮತ್ತು ಅಭಿನಂದನೆಗಳನ್ನು ಸ್ವೀಕರಿಸಿ, ವಂದಿಸಿದ್ದಾರೆ. ರಾಜ್ಯ ನಾಯಕರು ಭಾನುವಾರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಈ ನಡುವೆ, ಬಿ.ಎಸ್. ಯಡಿಯೂರಪ್ಪ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿ ವೇಳೆ ರಾಜ್ಯದಲ್ಲಿ ಪಕ್ಷದ ಗೆಲವು- ಸೋಲುಗಳ ವಿವರ ನೀಡಿದರು ಎನ್ನಲಾಗಿದೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ಸ್ಥಾನಗಳನ್ನು ಗೆಲ್ಲಬೇಕಿತ್ತು, ನಾವು 20 ಸ್ಥಾನಗಳನ್ನು ನಿರೀಕ್ಷಿಸಿದ್ದೆವು ಎಂದರು.
ಕೆಲವು ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳು ಗಳಿಸಿದ ಮತಗಳ ಪ್ರಮಾಣ ನಿರೀಕ್ಷೆಗಿಂತ ಕಡಮೆ ಇದೆ. ಇದಕ್ಕೆ ಯಾರು ಮತ್ತು ಏನು ಕಾರಣ ಎಂಬುದರ ಬಗ್ಗೆ ಪಕ್ಷದ ನಾಯಕರ ಜತೆ ಚರ್ಚಿಸುವುದಾಗಿ ತಿಳಿಸಿದರು.
ನಾನು ಸಚಿವಾಕಾಂಕ್ಷಿ ಅಲ್ಲ. ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಪ್ರಧಾನಿ ನರೇಂದ್ರಮೋದಿ ಅವರಿಗೆ ಬಿಟ್ಟದ್ದು ಎಂದರು.
ನಾನು ಆಕಾಂಕ್ಷಿ: ನಾನು ಸಚಿವ ಸ್ಥಾನಾಕಾಂಕ್ಷಿ. ಆದರೆ, ಆದಕ್ಕಾಗಿ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿದ್ದಾರೆ. ನನ್ನ ಅನುಭವವನ್ನು ಪರಿಗಣಿಸಿ ನರೇಂದ್ರಮೋದಿ ಅವರು ತಮ್ಮ ತಂಡದಲ್ಲಿ ನನ್ನನ್ನು ಸೇರಿಸಿಕೊಂಡರೆ ಸಂತೋಷ ಎಂದು ಹೇಳಿದ್ದಾರೆ.
Advertisement