
ಅಹ್ಮದಾಬಾದ್: ರಾಷ್ಟ್ರಪತಿಯವರಿಂದ ಪ್ರಧಾನಿಯಾಗಿ ನಿಯೋಜಿತಗೊಂಡ ನಂತರ, ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಅದ್ಧೂರಿ ಸ್ವಾಗತ ನೀಡಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಲು ಈಗ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಗುಜರಾತ್ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವೇ ಪ್ರಧಾನಿಯಾಗಿ ಉತ್ತಮ ಕರ್ತವ್ಯ ನಿರ್ವಹಿಸಲು ನಮಗೆ ನೆರವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಅಮಿತ್ ಶಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ದೇಶದಲ್ಲಿ ಅತಿ ಹೆಚ್ಚು ಸಂಸತ್ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್ನಲ್ಲಿ, ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಕಾರ್ಯತಂತ್ರ ರೂಪಿಸಿದ ಅಮಿತ್ ಅವರನ್ನು ಮೋದಿ ಹಾಡಿಹೊಗಳಿದರು.
ಗುಜರಾತ್ನ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಅಭಿವೃದ್ಧಿಯ ಪಥದಲ್ಲಿರುವ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿದ್ದು, ಮುಂದೆಯೂ ಅದೇ ಅಭಿವೃದ್ಧಿ ಪಥದಲ್ಲೇ ಅದು ಮುಂದುವರಿಯಲಿದೆ ಎಂದರು.
ನಂತರ, ಭಾರತದ ಪ್ರಗತಿ ಬಗ್ಗೆ ಮಾತನಾಡಿದ ಅವರು, ದೇಶದ 125 ಕೋಟಿ ಜನರು, ಭಾರತದ ಅಭಿವೃದ್ಧಿಗಾಗಿ ಶಪಥ ಮಾಡಿದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳೊಂದಿಗೆ ಭಾರತ ಸ್ಪರ್ಧೆಗಳಿಯುವ ದಿನ ಶೀಘ್ರವೇ ಬರುತ್ತದೆ ಎಂದರು.
ಆನಂತರ, ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿದ್ದ ಕ್ಷೇತ್ರ ಮಣಿನಗರ್ಗೆ ಭೇಟಿ ನೀಡಿದ ಮೋದಿ, ಅಲ್ಲಿ ಏರ್ಪಡಿಸಲಾಗಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಭಾವುಕರಾದ ಅವರು. ತಮ್ಮನ್ನು ಶಾಸಕರನ್ನಾಗಿ ಆರಿಸಿ, ಮಣಿನಗರ ಸೇರಿದಂತೆ ಸಮಗ್ರ ಗುಜರಾತ್ ಅಭಿವೃದ್ಧಿ ಮಾಡಲು ಅವಕಾಶ ನೀಡಿದ್ದಕ್ಕೆ ತಮ್ಮ ಕ್ಷೇತ್ರದ ಮತದಾರರಿಗೆ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು. ನಂತರ, ದೇಶ ಸೇವೆಗೆ ಹೊರಟಿರುವ ತಮ್ಮನ್ನು ಆಶೀರ್ವದಿಸುವಂತೆ ಅವರು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
Advertisement