ಹತ್ತನೇ ಚುನಾವಣೆ: ರಾಜ್ಯದಲ್ಲಿ ಕಾಂಗ್ರೆಸ್ಸೇತರರ ಮೆರಗು

ಹತ್ತನೇ ಚುನಾವಣೆ: ರಾಜ್ಯದಲ್ಲಿ ಕಾಂಗ್ರೆಸ್ಸೇತರರ ಮೆರಗು

ಹತ್ತನೇ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನಷ್ಟವಾಗದಿದ್ದರೂ, ನಾಲ್ಕನೇ ಲೋಕಸಭೆ ಚುನಾವಣೆ ನಂತರ ಕಡಿಮೆ ಸ್ಥಾನಗಳಿಸಿ ಹಿನ್ನಡೆ ಅನುಭವಿಸಿತು.
Published on
ಹತ್ತನೇ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚಿನ ಸ್ಥಾನ ನಷ್ಟವಾಗದಿದ್ದರೂ, ನಾಲ್ಕನೇ ಲೋಕಸಭೆ ಚುನಾವಣೆನಂತರ ಅತಿ ಕಡಿಮೆ ಸ್ಥಾನಗಳಿಸಿ ಹಿನ್ನಡೆ ಅನುಭವಿಸಿತು. ರಾಷ್ಟ್ರಾದ್ಯಂತ ರಾಜೀವ್‌ಗಾಂಧಿ ಹತ್ಯೆಯ ಅನುಕಂಪದ ಅಲೆ ರಾಜ್ಯದಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿತು. ಅದಕ್ಕೇ ಮತಗಳಿಕೆಯಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಅತ್ಯಂತ ಹಿನ್ನಡೆ ಸಾಧಿಸಿತ್ತು. ಇದಕ್ಕೆ ಕಾರಣ, ರಾಜ್ಯದಲ್ಲಿ ಹೊಸ ಶಕೆ. ಬಿಜೆಪಿ, ಜನತಾದಳ, ಜನತಾಪಕ್ಷ, ರೈತಸಂಘದ ಆರ್ಭಟ ಹೆಚ್ಚಾಗಿತ್ತು. ಮತ ಗಳಿಕೆಯಲ್ಲಿ ಈ ಮೂರು ಪಕ್ಷಗಳು ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದವು. ಅದಕ್ಕೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಮಾತ್ರ ಲಕ್ಷ ಮತಗಳ ಅಂತರದಿಂದ ಗೆದ್ದರು. ಬಿಜೆಪಿಯ ಒಬ್ಬರು ಲಕ್ಷ ಮತದ ಅಂತರ ಪ್ರಥಮ ಬಾರಿ ದಾಖಲಿಸಿದರು.
1991ರಲ್ಲಿ ನಡೆದ ಹತ್ತನೇ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 1,47,28,176 ಪುರುಷರು, 1,41,11,120 ಮಹಿಳೆಯರು ಸೇರಿ 2,88,39,296 ಮತದಾರರಿದ್ದರು. ಇವರಲ್ಲಿ 1,58,07,311 ಮತದಾರರು ಹಕ್ಕು ಚಲಾಯಿಸಿ, ಶೇ.54.81ರಷ್ಟು ಮತ ದಾಖಲಿಸಿದ್ದರು. ಶೇ. 2.53 ಮತಗಳು ಕುಲಗೆಟ್ಟಿದ್ದವು. 35,471 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. 28 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ 88, ರಾಜ್ಯ ಪಕ್ಷಗಳಿಂದ ಇಬ್ಬರು, ಮಾನ್ಯತೆರಹಿತ ಪಕ್ಷಗಳಿಂದ 35 ಹಾಗೂ 266 ಪಕ್ಷೇತರರು ಸೇರಿ 391 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 16, ರಾಜ್ಯ ಪಕ್ಷದ ಇಬ್ಬರು, ಮಾನ್ಯತೆರಹಿತ ಪಕ್ಷಗಳ 33 ಹಾಗೂ 266 ಪಕ್ಷೇತರರು ಸೇರಿದಂತೆ 317 ಮಂದಿ ಠೇವಣಿ ಕಳೆದುಕೊಂಡಿದ್ದರು. 15 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಮೂವರು ಗೆಲವು ಸಾಧಿಸಿದರೆ, 10 ಮಂದಿ ಠೇವಣಿ ನಷ್ಟಮಾಡಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ 28 ಕ್ಷೇತ್ರದಲ್ಲಿ ಸ್ಪರ್ಧಿಸಿ 23ರಲ್ಲಿ ಗೆಲವು ಸಾಧಿಸಿತು. ಶೇ. 42.13ರಷ್ಟು ಮತಗಳಿಸಿತ್ತು. ಬಿಜೆಪಿ ಪ್ರಥಮ ಬಾರಿಗೆ ರಾಜ್ಯದಲ್ಲಿ ದಾಖಲೆಯ ಮತಗಳನ್ನು ಪಡೆಯಿತು. 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 4ರಲ್ಲಿ ವಿಜಯ ಸಾಧಿಸಿ, ನಾಲ್ಕರಲ್ಲಿ ಠೇವಣಿ ಕಳೆದುಕೊಂಡಿತು. ಶೇ.29.28ರಷ್ಟು ಮತ ಗಳಿಸಿತ್ತು. ಜನತಾದಳ 21ರಲ್ಲಿ ಸ್ಪರ್ಧಿಸಿ ಒಂದರಲ್ಲೂ ಜಯ ಸಾಧಿಸದೆ ಐದರಲ್ಲಿ ಠೇವಣಿ ನಷ್ಟ ಮಾಡಿಕೊಂಡಿತ್ತು. ಶೇ. 17.72ರಷ್ಟು ಮತ ಪಡೆಯುವಲ್ಲಿ ಯಶಸಾಧಿಸಿತ್ತು. ಜನತಾಪಕ್ಷ ಆರರಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದು, ಮೂರರಲ್ಲಿ ಠೇವಣಿ ವಾಪಸ್ ಪಡೆಯದಿದ್ದರೂ ಶೇ. 3.82ರಷ್ಟು ಮತ ಪಡೆದಿತ್ತು. ರೈತ ಸಂಘ 10ರಲ್ಲಿ ಸ್ಪರ್ಧಿಸಿ ಒಂದರಲ್ಲೂ ಗೆಲ್ಲದೆ ಎಂಟರಲ್ಲಿ ಠೇವಣಿ ನಷ್ಟ ಮಾಡಿಕೊಂಡರೂ ಶೇ. 3.18ರಷ್ಟು ಮತ ಪಡೆದು ಕಾಂಗ್ರೆಸ್‌ಗೆ ಮುಳುವಾಗಿತ್ತು.
ಗುಲ್ಬರ್ಗದಿಂದ ಬಿ.ಜಿ. ಜವಳಿ, ರಾಯಚೂರಿನಿಂದ ವೆಂಕಟೇಶ್ ನಾಯ್ಕ್, ಕೊಪ್ಪಳದಿಂದ ಬಸವರಾಜ್‌ಪಾಟೀಲ್ ಅನ್ವರಿ, ಬಳ್ಳಾರಿಯಿಂದ ಬಸವರಾಜೇಶ್ವರಿ, ದಾವಣಗೆರೆಯಿಂದ ಚನ್ನಯ್ಯ ಒಡೆಯರ್, ಚಿತ್ರದುರ್ಗದಿಂದ ಸಿ.ಪಿ. ಮೂಡಲಗಿರಿಯಪ್ಪ, ಚಿಕ್ಕಬಳ್ಳಾಪುರದಿಂದ ವಿ. ಕೃಷ್ಣರಾವ್, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಕನಕಪುರದಿಂದ ಎಂ.ವಿ.ಚಂದ್ರಶೇಖರ ಮೂರ್ತಿ, ಬೆಂಗಳೂರು ಉತ್ತರದಿಂದ ಸಿ.ಕೆ. ಜಾಫರ್ ಷರೀಫ್, ಮಂಡ್ಯದಿಂದ ಜಿ. ಮಾದೇಗೌಡ, ಚಾಮರಾಜನಗರದಿಂದ (ಎಸ್‌ಸಿ) ವಿ. ಶ್ರೀನಿವಾಸ ಪ್ರಸಾದ್, ಮೈಸೂರಿನಿಂದ ಚಂದ್ರಪ್ರಭಾ ಅರಸ್, ಉಡುಪಿಯಿಂದ ಆಸ್ಕರ್ ಫರ್ನಾಂಡೀಸ್, ಚಿಕ್ಕಮಗಳೂರಿನಿಂದ ಡಿ.ಕೆ. ತಾರಾದೇವಿ, ಶಿವಮೊಗ್ಗದಿಂದ ಕೆ.ಜಿ. ಶಿವಪ್ಪ, ಕೆನರಾದಿಂದ ದೇವರಾಯ ನಾಯ್ಕ್, ಧಾರವಾಡ ದಕ್ಷಿಣದಿಂದ ಬಿ.ಎಂ. ಮುಜಾಹಿದ್, ಧಾರವಾಡ ಉತ್ತರದಿಂದ ಡಿ.ಕೆ. ನಾಯ್ಕರ್, ಬೆಳಗಾವಿಯಿಂದ ಷಣ್ಮುಖಪ್ಪ ಬಸಪ್ಪ ಸಿದ್ನಾಳ್, ಚಿಕ್ಕೋಡಿಯಿಂದ (ಎಸ್‌ಸಿ) ಬಿ. ಶಂಕರಾನಂದ, ಬಾಗಲಕೋಟೆಯಿಂದ ಭೀಮಪ್ಪ ನ್ಯಾಮಗೌಡರ್, ಬಿಜಾಪುರದಿಂದ ಬಸಗೊಂಡಪ್ಪ ಕಡಪ್ಪ ಅವರು ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದರು. ವೆಂಕಟೇಶ್‌ನಾಯಕ್ 1,22,458, ಬಿ. ಶಂಕರಾನಂದ್ 1,12,616, ವಿ. ಕೃಷ್ಣರಾವ್ 1,03,371 ಮತಗಳ ಅಂತರದ ಜಯವೇ ಈ ಚುನಾವಣೆಯಲ್ಲಿ ಅಧಿಕ. ಚಿಕ್ಕಬಳ್ಳಾಪುರದಲ್ಲಿ ವಿ. ಕೃಷ್ಣರಾವ್, ಚಿತ್ರದುರ್ಗದಲ್ಲಿ ಮೂಡಲಗಿರಿಯಪ್ಪ ಅವರು ಮಾತ್ರ ಮೂರು ಲಕ್ಷಕ್ಕೂ ಅಧಿಕ ಮತ ಪಡೆದಿದ್ದರು.
ಬೀದರ್‌ನಲ್ಲಿ (ಎಸ್‌ಸಿ) ಬಿಜೆಪಿಯ ರಾಮಚಂದ್ರ ವೀರಪ್ಪ ಅವರು ಕಾಂಗ್ರೆಸ್‌ನ ನರಸಿಂಗರಾವ್ ಸೂರ್ಯವಂಶಿ ಅವರನ್ನು 1,16,225 ಮತಗಳಿಂದ ಮಣಿಸಿದ್ದರು. ತುಮಕೂರಿನಲ್ಲಿ ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ ಅವರು ಕಾಂಗ್ರೆಸ್‌ನ ಜಿ.ಎಸ್. ಬಸವರಾಜ್ ಅವರನ್ನು 18,917 ಮತಗಳಿಂದ ಸೋಲಿಸಿದ್ದರು. ಬೆಂಗಳೂರು ದಕ್ಷಿಣದಿಂದ ಪ್ರೊ. ಕೆ. ವೆಂಕಟಗಿರಿಗೌಡ ಅವರು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನು 27,248 ಮತಗಳಿಂದ ಸೋಲುಣಿಸಿದ್ದರು. ಮಂಗಳೂರಿನಲ್ಲಿ ಬಿಜೆಪಿಯ ವಿ. ಧನಂಜಯಕುಮಾರ್ ಅವರು ಕಾಂಗ್ರೆಸ್‌ನ ಜನಾರ್ದನಪೂಜಾರಿ ಅವರನ್ನು 35,005 ಮತಗಳಿಂದ ಸೋಲಿಸಿದ್ದರು. ಹಾಸನದಲ್ಲಿ ಎಚ್.ಡಿ. ದೇವೇಗೌಡ ಅವರು ಜನತಾಪಕ್ಷದಿಂದ(ಸೋಷಿಯಲಿಸ್ಟ್) ಸ್ಪರ್ಧಿಸಿ, ಕಾಂಗ್ರೆಸ್‌ನ ಎಚ್.ಸಿ. ಶ್ರೀಕಂಠಯ್ಯ ಅವರನ್ನು ಕೇವಲ 3,191 ಮತಗಳಿಂದ ಮಣಿಸಿ ಪ್ರಥಮ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದರು.
ಜನತಾದಳದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭೀಮಪ್ಪ ನ್ಯಾಮಗೌಡರ್ ಅವರಿಂದ 21,204 ಮತಗಳ ಅಂತರದಲ್ಲಿ ಸೋತಿದ್ದು ಈ ಚುನಾವಣೆಯ ಗಮನಾರ್ಹ ಅಂಶಗಳಲ್ಲಿ ಒಂದು. ಇದಲ್ಲದೆ, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು 2,40,479 ಮತಗಳನ್ನು ಪಡೆದರೂ, ಕಾಂಗ್ರೆಸ್‌ನ ಕೆ.ಜಿ. ಶಿವಪ್ಪ ಅವರಿಂದ 40,703 ಮತಗಳ ಅಂತರದಿಂದ ಸೋಲು ಕಂಡರು. ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ ಕೇವಲ 455 ಮತಗಳಿಂದ ಬಿಜೆಪಿಯ ಎಸ್.ಎ. ರವೀಂದ್ರನಾಥ್ ಅವರನ್ನು ಸೋಲಿಸಿದ್ದು ಅತ್ಯಂತ ಕಡಿಮೆ ಅಂತರ.
-ಕೆರೆ ಮಂಜು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com