ಮಕ್ಕಳು ಅಂಗವಿಕಲರಾದರೆ ಆ ನೋವನ್ನು ಸಹಿಸುವುದರೊಂದಿಗೆ ಇತರ ಜವಾಬ್ದಾರಿಗಳನ್ನು ನಿರ್ವಹಿಸುವುದಿದೆಯಲ್ಲಾ, ಅದು ಎಲ್ಲದಕ್ಕಿಂತಲೂ ಸವಾಲಿನ ಸ್ಥಿತಿ, ಅಂತಹ ಸ್ಥಿತಿಯನ್ನು ಬೆಂಗಳೂರಿನ ದೊರೆಸ್ವಾಮಿ ರಾಜು ಅವರೂ ಎದುರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದಿನ ಮಾತು. 2013ರ ವಿಧಾನಸಭಾ ಚುನಾವಣೆ ಸಂದರ್ಭ, ಲಾರಿ ಸ್ಟ್ಯಾಂಡ್ ನಲ್ಲಿ ಬ್ಯಾಟರಿ ರಿಪೇರಿ ಅಂಗಡಿಯನ್ನು ನಡೆಸಿ ನೆಮ್ಮದಿಯಿಂದಿದ್ದ ದೊರೆಸ್ವಾಮಿ ಕುಟುಂಬಕ್ಕೆ 2013ರ ಏ.17ರಂದು ದೊಡ್ಡ ಅಘಾತ ಎದುರಾಗಿತ್ತು. ಇಂಜಿನಿಯರಿಂಗ್ ಓದಿ ತಂದೆ ತಾಯಿಯರ ಕನಸನ್ನು ನನಸಾಗಿಸಬೇಕಿದ್ದ ಮಗಳು ಲಿಶಾ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದ್ವಿತೀಯ ಪಿಯು ಪರೀಕ್ಷೆ ಮುಗಿಸಿ ಸಿಇಟಿ ಪರೀಕ್ಷೆಯ ಕೋಚಿಂಗ್ ಗೆ ಹೋಗುತ್ತಿದ್ದ ಲಿಶಾ ವಿರಾಮದ ಅವಧಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ಸ್ಫೋಟ ಸಂಭವಿಸಿ ಐದು ಅಡಿ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಾಜಿನ ಚೂರುಗಳು ಹೊಕ್ಕಿದ್ದರಿಂದ ಎಡಗಾಲಿಗೆ ತೀವ್ರತರನಾದ ಗಾಯವಾಗಿತ್ತು. ಘಟನೆ ತಿಳಿಯುತ್ತಿದ್ದಂತೆಯೇ ಪೋಷಕರು ಅಘಾತಕ್ಕೊಳಗಾದರು, ಆದರೇನಂತೆ ಇಂದಿನ ವೈಜ್ನಾನಿಕ ಯುಗದಲ್ಲಿ ಗಾಜಿನ ಚೂರುಗಳು ಹೊಕ್ಕಿದ್ದ ಕಾಲಿಗೆ ಚಿಕಿತ್ಸೆ ಕೊಡಿಸಿ ಹಿಂದಿನಂತಯೇ ಮಾಡುವುದು ಕಷ್ಟಸಾಧ್ಯವಲ್ಲ ಎಂದು ಸಾವರಿಸಿಕೊಂಡ ಪೋಷಕರು ದೃತಿಗೆಡಲಿಲ್ಲ. ಮಗಳು ಹಿಂದಿನಂತೆಯೇ ಆಗಲು ಅಗತ್ಯವಿರುವ ಸಕಲ ರೀತಿಯ ಚಿಕಿತ್ಸೆ ಕೊಡಿಸಿದರು. ಆಪರೇಷನ್ ಕೂಡ ನಡೆಯಿತು ಮೂಳೆಗೆ ಪೆಟ್ಟು ಬಿದ್ದಿದ್ದರಿಂದ ಕಾಲಿಗೆ ಬೋನ್ ಗ್ರಾಫ್ಟಿಂಗ್ ಚಿಕಿತ್ಸೆಯೂ ಆಯಿತು. 3-4 ತಿಂಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ವೈದ್ಯರಿಂದ ಭರವಸೆಯೂ ಸಿಕ್ಕಿತು, ಮುಂದಿನ ಬಾರಿ ಆಸ್ಪತ್ರೆಗೆ ಹೋದಾಗ ವೈದ್ಯರ ಭರವಸೆ ಈಡೇರಿರಲಿಲ್ಲ, ಕಾಲಿನ ಮೂಳೆಗಳು ಇನ್ನೂ ಕೂಡಿಕೊಂಡಿರಲಿಲ್ಲ. ಬಿಬಿಎಂಪಿ ಅವರು ಹಾಕಿದ್ದ ಟಾರ್ ಕಿತ್ತೋಗುತ್ತದೆ, ಅದಕ್ಕೇ ಗ್ಯಾರೆಂಟಿ ಇಲ್ಲದಾಗ ನಾವು ಮಾಡಿದ ಆಪರೇಶನ್ ಗೆ ಹೇಗೆ ಗ್ಯಾರೆಂಟಿ ಕೊಡಕ್ಕೆ ಆಗುತ್ರೀ? ಎಂಬ ವೈದ್ಯರ ಮಾತು ಲಿಶಾ ಕುಟುಂಬದವರನ್ನು ಕಂಗಾಲಾಗಿಸಿತು. ಈ ವರೆಗೂ 7 ಶಸ್ತ್ರಚಿಕಿತ್ಸೆ ನಡೆದಿದೆ, ಇನ್ನೂ 2 ಶಸ್ತ್ರಚಿಕಿತ್ಸೆ ನಡೆಯುವುದು ಬಾಕಿ ಇದೆ. ಈವರೆಗೂ 20-25 ಲಕ್ಷ ವೆಚ್ಚವಾಗಿದೆ.ಆದರೂ ಪರಿಸ್ಥಿತಿ ಅಷ್ಟೊಂದು ಸುಧಾರಿಸಿಲ್ಲ. 2 ವರ್ಷದಿಂದ ನರಕ ಅನುಭವಿಸಿದ್ದು ಈಗ 2-3 ತಿಂಗಳಿನಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎನ್ನುತ್ತಾರೆ ಕನ್ನಡ ಪ್ರಭ.ಕಾಮ್ ನೊಂದಿಗೆ ಮಾತನಾಡಿರುವ ಲಿಶಾ ತಂದೆ ದೊರೆಸ್ವಾಮಿ ರಾಜು.