ಆಹಾರ ಪದ್ಧತಿ

ಆಹಾರ ಸೇವಿಸುವ ಮುನ್ನ ತುಸು ಉಪ್ಪುಸೇವಿಸುವುದು ಹಿತಕರ..
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಆಹಾರ ಸೇವಿಸುವ ಮುನ್ನ ತುಸು ಉಪ್ಪುಸೇವಿಸುವುದು ಹಿತಕರ; ಆಹಾರ ಸೇವಿಸಿದ ಅರ್ಧಗಂಟೆಯ ನಂತರ ಹಾಲು ಕುಡಿಯಬೇಕು, ಅಥವಾ ಅಂತ್ಯದಲ್ಲಿ ಲವಣದ ನಿವಾರಣೆಗಾಗಿ ಮಧುರರಸವನ್ನು ಸೇವಿಸಿ, ಊಟ ಮುಗಿಸಬೇಕು. ಸ್ವಾದಿಷ್ಟವಾಗಿರುವಂಥ ಆಹಾರವನ್ನು ಉತ್ತರೋತ್ತರವಾಗಿ ಸೇವಿಸುತ್ತಾ ಬರಬೇಕು. ಊಟದ ಅಂತ್ಯದಲ್ಲಿ ಮೊಸರು ತಿನ್ನಬಾರದು ಹಾಗೂ ರಾತ್ರಿಯ ಹೊತ್ತ ಮೊಸರು ಸೇವಿಸಬಾರದು.

ಆಹಾರ ಸೇವನೆಯ ನಂತರ, ತಕ್ಷಣ ಅಧಿಕ ನೀರು ಕುಡಿಯುವುದರಿಂದ ಆಹಾರ ಜೀರ್ಣವಾಗುವುದಿಲ್ಲ ಮತ್ತು ದ್ರವಾಂಶವಿಲ್ಲದೇ ಆಹಾರ ಪಚನವಾಗುವುದಿಲ್ಲ. ಆದ್ದರಿಂದ ಜಠರಾಗ್ನಿಯನ್ನು ಪ್ರಬಲವಾಗಿರಿಸಲು ಘನ ಪದಾರ್ಥದ ಜತೆಗೆ ಲಘು (ದ್ರವ) ಆಹಾರ ಸೇವಿಸಬೇಕು. ಅನಿವಾರ್ಯವೆನಿಸಿದರೆ ತುಸು ತುಸು ನೀರು ಗುಟುಕರಿಸಬೇಕು.

ಅಧಿಕ ಆಹಾರ ಸೇವಿಸುವುದು ಆಯಸ್ಸು ಮತ್ತು ಸುಖಕ್ಕೆ ಹಾನಿಕರ ಎಂದು ಮನುಸ್ಮೃತಿಯಲ್ಲಿ ಹೇಳಿದೆ. ಹೀನ ಪ್ರಮಾಣ ಅಂದರೆ ಅವಶ್ಯಕತೆಗಿಂತ ಕಡಿಮೆ ಆಹಾರ ಸೇವಿಸುವುದರಿಂದ ಶೀಘ್ರವಾಗಿ ಸಮಸ್ತ ದೋಷಗಳು ಕುಪಿತಗೊಳ್ಳುತ್ತವೆ. ಆದ್ದರಿಂದ ಅವಶ್ಯಕತೆ (ದೈಹಿಕ ಶ್ರಮ)ಗೆ ತಕ್ಕಂತೆಯೇ ಆಹಾರ ಸೇವಿಸಬೇಕು. ಆಹಾರ ಸೇವನೆಗಾಗಿ ಒಂದು ನಿರ್ದಿಷ್ಟ ಸಮಯವನ್ನು ಕೂಡ ಕಟ್ಟು ನಿಟ್ಟಾಗಿ ಪಾಲಿಸಬೇಕು.

ಅನಿಯಮಿತ ಸಮಯಾವಧಿಯಲ್ಲಿ ಆಹಾರ ಸೇವಿಸುವುದು ವಿಷ ಸೇವನೆಗೆ ಸಮಾನ ಎಂದು ಹೇಳಲಾಗಿದೆ. ಇಪ್ಪತ್ನಾಲ್ಕು ಗಂಟೆಗಳ ಸಮಯದಲ್ಲಿ ಆಹಾರ ಸೇವನೆಗಾಗಿ ಸೂಕ್ತವಾದ ಎರಡು ಅಥವಾ ನಾಲ್ಕು ಸಮಯಗಳಲ್ಲಿ ನಿರ್ಧರಿಸಿಕೊಳ್ಳಬೇಕು. ಒಮ್ಮೆಗೇ ಒಪ್ಪತ್ತು ಹೊಟ್ಟೆ ಬಿರಿಯುವಂತೆ ತಿನ್ನಬಾರದು.

-ಡಾ. ವಿಶ್ವಸಂತೋಷ ಭಾರತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com