
ಬೆಂಗಳೂರು: ಬ್ರೈನ್ ಟ್ಯೂಮರ್ಗೆ ಶಸ್ತ್ರಕ್ರಿಯೆ ರಹಿತ ಚಿಕಿತ್ಸೆ ಪಡೆಯಬಹುದು! ಇಂತಹದ್ದೊಂದು ಅಪರೂಪದ ಪ್ರಯತ್ನವನ್ನು ಇಲ್ಲಿನ ಎಸ್.ಬಿ.ಎಫ್ ಹೆಲ್ತ್ ಕೇರ್ ಮತ್ತು ರಿಸರ್ಚ್ ಸಂಸ್ಥೆ ಪ್ರಕಟಿಸಿದೆ.
ಬ್ರೈನ್ ಟ್ಯೂಮರ್ ಮೇಲೆ ನಡೆಸಿದ ಹೆಚ್ಚಿನ ಸಂಶೋಧನೆಗಳಿಂದ ಕಿಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆ(ರೇಡಿಯೋ ಥೆರಪಿ)ಯ ಅಗತ್ಯವಿಲ್ಲದೇ ಕ್ಯಾನ್ಸರಿನಂತಹ ಮಾರಕ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಎಸ್ಪಿಎಂಎಫ್ (sequentially programmed Magnetic Field therapy) ಬಳಸಿಕೊಳ್ಳುವ ಆ್ಯಕ್ಟಿಸ್ ಸೋಮಾ ಮಷಿನ್ ಮೂಲಕ ನೀಡಬಹುದಾದ ಚಿಕಿತ್ಸೆಯಿಂದ ಇದು ಸಾಧ್ಯವಾಗಿದೆ.
ಕ್ಯಾನ್ಸರ್ ರೋಗಕ್ಕೆ ನೀಡಲಾಗುವ ಈ ಚಿಕಿತ್ಸೆಯಲ್ಲಿ ಶಸ್ತ್ರಕ್ರಿಯೆಯ ಅಗತ್ಯವಿರುವುದಿಲ್ಲ. ಕೆಲವು ವಿಧದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಈ ವಿಧಾನವು ಅತ್ಯಂತ ಪರಿಣಾಮಕಾರಿ ಎನಿಸಿದೆ. ಎಸ್ಬಿಎಫ್ ಹೆಲ್ತ್ಕೇರ್ ಮತ್ತು ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ತನ್ನ ಬೆಂಗಳೂರು ಮತ್ತು ಮುಂಬೈ ಸೆಂಟರ್ಗಳಲ್ಲಿ ಈ ಚಿಕಿತ್ಸೆಯಿಂದ ರೋಗಿಗಳನ್ನು ಗುಣಪಡಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಮ್ಯಾಗ್ನೆಟಿಕ್ ತಂತ್ರಜ್ಞಾನವನ್ನು ಅತಿಹೆಚ್ಚು ಸಂಕೀರ್ಣವಾದ, ಸರಣಿಬದ್ಧವಾಗಿ ಯೋಜಿಸಿದ ಲೇಸರ್ ಗೈಡ್ಗಳ ಸಹಾಯದಿಂದ ಉದ್ದೇಶಿತ ಜೀವಕೋಶಗಳ ಮೇಲೆ ನಿಖರವಾಗಿ ಕೇಂದ್ರೀಕರಿಸಿ ಪ್ರಯೋಗಿಸಲಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ, ಕಂಪ್ಯೂಟರ್ನ ನಿಯಂತ್ರಣಕ್ಕೊಳಪಟ್ಟಿರುತ್ತದೆ ಎಂದು ಈ ಚಿಕಿತ್ಸೆಯ ರೂವಾರಿ ವಿಂಗ್ ಕಮಾಂಡರ್ ಡಾ. ವಿ. ಜಿ ವಸಿಷ್ಠ ಅವರು ತಿಳಿಸಿದ್ದಾರೆ.
ರೇಡಿಯೇಶನ್ ಚಿಕಿತ್ಸೆಯ ನಂತರವೂ ಬ್ರೈನ್ ಟ್ಯೂಮರ್ ಮರುಕಳಿಸಿದ ಶಶಿಧರ್ ಎಂಬವರು 28 ದಿನಗಳ ಕಾಲ ಈ ಚಿಕಿತ್ಸೆಗೆ ಒಳಪಟ್ಟ ನಂತರ ಗುಣಮುಖರಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ. ಜಾಗತಿಕ ಕ್ಯಾನ್ಸರ್ ದಿನದ ಈ ಸಂದರ್ಭದಲ್ಲಿ ಈ ಕ್ರಾಂತಿಕಾರಿ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಡಾ. ವಸಿಷ್ಠ ಅಭಪ್ರಾಯಪಡುತ್ತಾರೆ.
ಶಪಥ ವೃಕ್ಷ ಅಭಿಯಾನ
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮಣಿಪಾಲ್ ಆಸ್ಪತ್ರೆ `ಶಪಥ ವೃಕ್ಷ' ಅಭಿಯಾನ ಆರಂಭಿಸಿದೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹಾಗೂ ರೋಗದ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವಂತೆ ಜಾಗೃತಿ ಮೂಡಿಸಲು ಆಸ್ಪತ್ರೆ ಆವರಣ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ `ಶಪಥ ವೃಕ್ಷ'ದ ಕಲಾಕೃತಿ ಸ್ಥಾಪಿಸಲಾಗಿದೆ.
ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಡಾ.ಎಚ್.ಸುದರ್ಶನ್ ಬಲ್ಲಾಳ್, ದೇಶದಲ್ಲಿ ಲಕ್ಷ ಜನರಲ್ಲಿ 90 ಮಂದಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಶೇ.5ರಷ್ಟು ರೋಗಿಗಳಲ್ಲಿವಂಶವಾಹಿಯಿಂದ ರೋಗ ಬರುತ್ತದೆ. ಸಿಗರೇಟು, ಹಸಿ ತಂಬಾಕು ಸೇರಿದಂತೆ ಯಾವುದೇ ಮಾದಕ ಪದಾರ್ಥಗಳನ್ನು ಸೇವಿಸುವ ಹವ್ಯಾಸ ಮಾಡಿಕೊಂಡ ವರಲ್ಲಿ ಕ್ಯಾನ್ಸರ್ ಬರುವ ಪ್ರಮಾಣ ಹೆಚ್ಚಿದೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಬ್ಬಯ್ಯ ಅರುಣನ್ ಮಾತನಾಡಿದರು. ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ನಟ ಸಂತೋಷ್ ಅವರನ್ನು ರಾಯಭಾರಿಯಾಗಿ ಆರಿಸಲಾಯಿತು.
Advertisement