ನಾನು ಹಾಲಿ ಸಂಸದೆ ಅಲ್ಲ, ಆದರೂ ಜನರಿಗಾಗಿ ಕೆಲಸ ಮಾಡುತ್ತೇನೆ: ರಮ್ಯಾ
ರಾಜಕಾರಣಿ ಹಾಗೂ ನಟಿ ರಮ್ಯಾ ಅವರು ತನ್ನ ಬಗ್ಗೆ ಯಾರೂ ಏನೇ ಅಂದುಕೊಂಡರೂ ಕೇರ್ ಮಾಡದೇ ತನಗೆ ಸರಿ ಅನಿಸದನ್ನು ಮಾತ್ರ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ರಮ್ಯಾ, ದಿಢೀರ್ ಮಂಡ್ಯದಲ್ಲಿ ಕಾಣಿಸಿಕೊಂಡು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಮಾಜಿ ಸಂಸದೆ, ರಾಜಕೀಯದೊಂದಿಗೆ ಉತ್ತಮ ಪಾತ್ರಗಳು ಸಿಕ್ಕರೇ ಸಿನಿಮಾದಲ್ಲೂ ನಟಿಸುವುದಾಗಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನೀವು ಎಲ್ಲಿದ್ರಿ? ಮತ್ತು ಏನು ಮಾಡುತ್ತಿದ್ರಿ?
ನಾನು ಇನ್ನೂ ಸ್ವಲ್ಪ ದಿನ ದೂರನೇ ಇರುತ್ತೇನೆ. 2013ರಲ್ಲಿ ಚುನಾವಣೆ ಸಂದರ್ಭದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ಆ ಒಂಬತ್ತು ತಿಂಗಳು ನಾನು ತುಂಬಾ ನೋವು ಅನುಭವಿಸಿದೆ. ಈ ಸಂದರ್ಭದಲ್ಲಿ ನನಗೆ ಒಂದು ಬ್ರೇಕ್ ಬೇಕು ಅನಿಸಿತು ಮತ್ತು ಅಧ್ಯಯನ ಮಾಡಬೇಕು ಅನಿಸಿತು ಮತ್ತು ನನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಲು ಸಮಯ ಬೇಕು ಅನಿಸಿತು. ಹೀಗಾಗಿ ದೂರ ಉಳಿದೆ.
ಯಾವ ಕೋರ್ಸ್ ಮಾಡಿದಿರಿ? ಅದು ಮುಕ್ತಾಯವಾಗಿದಿಯೇ?
ನಾನು ಲಂಡನ್ನಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಾರ್ವಜನಿಕ ನೀತಿ ಬಗ್ಗೆ ಒಂದು ಶಾರ್ಟ್ ಕೋರ್ಸ್ ಮಾಡಿದ್ದೇನೆ. ಆದು ಅದು ಅಲ್ಲಿ ಮಾಡಿದೆ ಅನ್ನೊದು ಮಾತ್ರ ಹೇಳಲ್ಲ. ಈಗ ಆಗಸ್ಟ್ 15ರಿಂದ ಹ್ಯಾಂಬರ್ಗ್ನಲ್ಲಿ ಗ್ಲೋಬಲ್ ಗವರ್ನೆನ್ಸ್ ಬಗ್ಗೆ ಮತ್ತೊಂದು ಎರಡು ವಾರಗಳ ಕೋರ್ಸ್ ಮಾಡಲು ತೆರಳುತ್ತಿದ್ದೇನೆ.
ಒಂದೇರಡು ದಿನಗಳ ಭೇಟಿಗಾಗಿ ಮಾತ್ರ ರಾಜ್ಯಕ್ಕೆ ಬಂದಿದ್ದೀರಾ ಅಥವಾ ಒಳ್ಳೆಯ ಕೆಲಸಕ್ಕಾಗಿ ಬಂದಿದ್ದೀರಾ?
ಇಲ್ಲ. ಒಂದೇರಡು ದಿನಗಳಿಗಾಗಿ ಅಂತ ನಾನು ಹೇಳಲ್ಲ. ನನ್ನ ಅಗತ್ಯ ಇತ್ತು. ಹೀಗಾಗಿ ಭೇಟಿ ನೀಡಿದೆ. ಒಳ್ಳೆಯ ಕೆಲಸಕ್ಕಾಗಿ ನಾನು ಇಲ್ಲೇ ಇರುತ್ತೇನೆ. ಇದರ ಮಧ್ಯ ನಾನು ಅಧ್ಯಯನಕ್ಕಾಗಿ ಸಮಯ ತೆಗೆದುಕೊಳ್ಳುತ್ತೇನೆ. ನಾನು ಮಾಜಿ ಸಂಸದೆ, ಪುಟ್ಟರಾಜು ಹಾಲಿ ಸಂಸದ. ಆದರೂ ಮಂಡ್ಯ ಜನ ರಮ್ಯಾ ಎಲ್ಲಿ ಅಂತ ಕೇಳುತ್ತಿದ್ದಾರೆ. ಆದರೆ ಪುಟ್ಟರಾಜು ಎಲ್ಲಿ ಅಂತ ಕೇಳುತ್ತಿಲ್ಲ. ಅವರೂ ಇದುವರೆಗೂ ರೈತರ ಮನೆಗೆ ಭೇಟಿ ನೀಡಿಲ್ಲ. ಮಧ್ಯಮಗಳು ಹಾಗೂ ಜನ ಅವರನ್ನು ಪ್ರಶ್ನಿಸಬೇಕು.
ನೀವು ರಾಜಕೀಯದಲ್ಲಿ ಮುಂದುವರೆಯುತ್ತೀರಾ ಅಥವಾ ಸಿನಿಮಾ ಕಡೆ ಗಮನ ಕೊಡುತ್ತೀರಾ?
ಸಿನಿಮಾ ಕಡೆ ಗಮನಕೊಡುತ್ತೇನೆ ಅಂತ ಹೇಳಲಾರೆ. ಎರಡೂ ಕಡೆ ಗಮನ ಕೊಡುತ್ತೇನೆ. ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾನೂ ಮಾಡುತ್ತೇನೆ.
ನೀವು ಇಲ್ಲಿ ಇರದಿದ್ದರೂ ಕ್ಷೇತ್ರದ ಜನತೆಯನ್ನು ಕಾಪಾಡಿಕೊಳ್ಳಲು ಸಾಧ್ಯವೆ?
ನಾನು ಹಾಲಿ ಸಂಸದೆ ಅಲ್ಲ. ಆದರೂ ಜನತೆಗಾಗಿ ಕೆಲಸ ಮಾಡುತ್ತೇನೆ. ಮಂಡ್ಯದಲ್ಲಿ ನಮ್ಮ ಸಂಸದ, ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಮ್ಮದೇ ಸರ್ಕಾರ ಇದೆ. ಅವರು ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಜನಾ ಇದನ್ನು ಅರ್ಥ ಮಾಡಿಕೊಳ್ಳಬೇಕು.
ನೀವು ವಸತಿ ಸಚಿವ ಅಂಬರೀಷ್ ಜತ ಜಗಳ ಮಾಡಿಕೊಂಡಿದ್ದೀರಾ?
ಇಲ್ಲ. ನಾವು ಯಾವತ್ತೂ ಜಗಳ ಮಾಡಿಕೊಂಡಿಲ್ಲ ಮತ್ತು ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನಗೆ ಯಾವುದೇ ಬಣ ಇಲ್ಲ ಮತ್ತು ಬಣ ಬೆಂಬಲಿಗರು ಇಲ್ಲ. ತೋರಿಸಿ, ನನ್ನ ಬಣದಲ್ಲಿ ಯಾರಿದ್ದಾರೆ ಅಂತ. ನಮ್ಮ ಮಧ್ಯೆ ಭಿನ್ನಾಭಿಪ್ರಾಯ ತರಲು ಕೆಲವು ಜನ ಇದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಕಾಮನ್. ಆದರೆ ಇದೆಲ್ಲಾ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು.
ಇತ್ತೀಚಿಗೆ ಮಂಡ್ಯದಲ್ಲಿ ಬಹಳಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಪ್ರಕಾರ ಆತ್ಮಹತ್ಯೆಗೆ ಏನು ಕಾರಣ?
ಬೆಳೆ ವೈಫ್ಯಲ್ಯದಿಂದ ಕೆಲವರು, ಆರ್ಥಿಕ ಸಂಕಷ್ಟದಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಸಹಜ ಸಾವು. ಆದರೆ ಮಾಧ್ಯಮಗಳು ಅದನ್ನು ತಪ್ಪಾಗಿ ಬಿಂಬಿಸುತ್ತಿವೆ. ಅಂತಹ ಪ್ರಕರಣಗಳನ್ನು ವರದಿ ಮಾಡುವಾಗ ಮಾಧ್ಯಮಗಳು ತುಂಬಾ ಜವಾಬ್ದಾರಿಯಿಂದ ಮಾಡಬೇಕು.
ನೀವು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದಾಗ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಲಿಲ್ಲವೇ?
ಇಲ್ಲ. ಎಟಿಐಐ ಪುಣೆ ಕಾರ್ಯಕ್ರಮ ಪೂರ್ವನಿಗದಿತವಾಗಿದ್ದರಿಂದ ಚರ್ಚಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ನೀವು ಎಂಎಲ್ಸಿ ಸ್ಥಾನದ ಆಕಾಂಕ್ಷಿಯಂತೆ?
ಇಲ್ಲ. ನನಗೆ ಈಗ 32 ವರ್ಷ, ರಾಜಕೀಯವಾಗಿ ಬೆಳೆಯಲು ನನಗೆ ಸಾಕಷ್ಟು ಸಮಯ ಇದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ