ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ನಲ್ಲಿ ಮುಗಿಲುಮುಟ್ಟಿದ ಸಂಭ್ರಮ, ಬಿಜೆಪಿಯಲ್ಲಿ ನೀರವ ಮೌನ

ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲು ಆರಂಭಿಸುತ್ತಿದ್ದಂತೆಯೇ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ಸಿಹಿ ಹಂಚಿ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ವಿಶ್ವಾಸದೊಂದಿಗೆ ಸಂಭ್ರಮಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಿರ್ಣಾಯಕ ಮುನ್ನಡೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದರು. (ಫೋಟೋ | ಪಿಟಿಐ)
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಿರ್ಣಾಯಕ ಮುನ್ನಡೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದರು. (ಫೋಟೋ | ಪಿಟಿಐ)
Updated on

ಬೆಂಗಳೂರು: ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲು ಆರಂಭಿಸುತ್ತಿದ್ದಂತೆಯೇ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ಸಿಹಿ ಹಂಚಿ ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ವಿಶ್ವಾಸದೊಂದಿಗೆ ಸಂಭ್ರಮಿಸಿದರು.

ಸಮಯ ಕಳೆದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನಡೆಯಿತು. ವಾರದಿಂದಲೂ ಚಟುವಟಿಕೆಯಿಂದ ತುಂಬಿ ತುಳುಕುತ್ತಿದ್ದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ, ಪಕ್ಷದ ಸೋಲು ಸ್ಪಷ್ಟವಾಗುತ್ತಿದ್ದಂತೆ ಮೌನವಾಗತೊಡಗಿತು. ಅಭ್ಯರ್ಥಿಗಳ ಆಘಾತಕಾರಿ ಪ್ರದರ್ಶನದ ಪರಿಣಾಮ ಮಧ್ಯಾಹ್ನದ ವೇಳೆಗೆ ಮುಳುಗಲಾರಂಭಿಸಿತು.

ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯು ಸಂಪೂರ್ಣ ನಿರ್ಜನವಾಗಿ ಕಂಗೊಳಿಸುತ್ತಿದ್ದು, ಆವರಣದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಯಾರೂ ಕಾಣಿಸುತ್ತಿರಲಿಲ್ಲ.

ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಪಕ್ಷ ಆರಾಮವಾಗಿ ಮ್ಯಾಜಿಕ್ ನಂಬರ್ 113 ದಾಟಲಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು, '40 ಪರ್ಸೆಂಟ್ ಕಮಿಷನ್ ನಿಮ್ಮದು, ಸರ್ಕಾರ ನಮ್ಮದು! ಎಂದು ಕೂಗಿದರು.

<strong>ಶನಿವಾರದಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಬೆಂಬಲಿಗರ ಸಂಭ್ರಮ (ಚಿತ್ರ- ವಿನೋದ್ ಕುಮಾರ್ ಟಿ)</strong>
ಶನಿವಾರದಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಬೆಂಬಲಿಗರ ಸಂಭ್ರಮ (ಚಿತ್ರ- ವಿನೋದ್ ಕುಮಾರ್ ಟಿ)

ಬೆಳಗ್ಗೆ 7 ಗಂಟೆಯಿಂದಲೇ ಏಜೆಂಟರು ನಗರದಾದ್ಯಂತ ಮತ ಎಣಿಕೆ ಕೇಂದ್ರಗಳನ್ನು ಪ್ರವೇಶಿಸಲು ಆರಂಭಿಸಿದರು. ಕೇಂದ್ರಗಳ ಹೊರಗೆ ಕಾದು ಕುಳಿತಿದ್ದ ಕಾಂಗ್ರೆಸ್ ಕಾರ್ಯಕರ್ತರು ಟ್ರೆಂಡ್ ಸ್ಪಷ್ಟವಾಗುತ್ತಿದ್ದಂತೆಯೇ ಸಂಭ್ರಮಾಚರಣೆ ಆರಂಭಿಸಿದರು. ಬಿಜೆಪಿ ಕಾರ್ಯಕರ್ತರು ಗುಂಪುಗಳಲ್ಲಿ ಚರ್ಚೆ ನಡೆಸುತ್ತಿದ್ದರು ಮತ್ತು ಏನು ತಪ್ಪಾಗಿದೆ ಎಂದು ಲೆಕ್ಕಾಚಾರ ಮಾಡಲು ಮುಂದಾಗಿದ್ದರು.

ಆರಂಭಿಕ ಸುತ್ತಿನಲ್ಲಿ ಯಶವಂತಪುರದ ಅಭ್ಯರ್ಥಿ ಜವರಾಯಿಗೌಡ ಮುನ್ನಡೆ ಸಾಧಿಸಿದ್ದರಿಂದ ಉತ್ಸಾಹ ತೋರಿದ ಜೆಡಿಎಸ್ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್‌ಟಿ ಸೋಮಶೇಖರ್‌ ಅವರು ಮುನ್ನಡೆ ಕಾಯ್ದುಕೊಂಡ ಬಳಿಕ ಭರವಸೆ ಕಳೆದುಕೊಂಡರು. ಬಸವನಗುಡಿಯ ಬಿಎಂಎಸ್ ಕಾಲೇಜಿನ ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ರಿಜ್ವಾನ್ ಅರ್ಷದ್ ಮತ್ತು ಜಮೀರ್ ಅಹ್ಮದ್ ಖಾನ್ ಅವರನ್ನು ಪಕ್ಷದ ಕಾರ್ಯಕರ್ತರು ಮೇಲೆತ್ತಿ ಹರ್ಷ ವ್ಯಕ್ತಪಡಿಸಿದರು.

ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವಿನ ಹಣಾಹಣಿಯು ಜನರಲ್ಲಿ ಕುತೂಹಲ ಕೆರಳಿಸಿದ್ದರಿಂದ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಕುಸುಮಾ ಮುನ್ನಡೆ ಸಾಧಿಸಿದ್ದರು. ಆದರೆ, ಸಂಜೆ ವೇಳೆಗೆ ಮುನಿರತ್ನ ಗೆಲುವು ಸಾಧಿಸಿದರು. ಗಾಂಧಿನಗರ ಕ್ಷೇತ್ರಗಳಲ್ಲದೆ ಜಯನಗರ ಕ್ಷೇತ್ರದಲ್ಲೂ ಗೆಲುವಿನ ಅಂತರ ತುಂಬಾ ಕಡಿಮೆ ಇದ್ದದ್ದರಿಂದ ಮತ ಎಣಿಕೆ ಕೇಂದ್ರಗಳ ಸುತ್ತ ತೀವ್ರ ಕುತೂಹಲ ಕೆರಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com