ಅನಂತಪುರ: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ ಮತ್ತೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಚಲನಚಿತ್ರ ಪ್ರದರ್ಶನದ ವೇಳೆ ಇಬ್ಬರ ಮಧ್ಯೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿ ಶೋ ಮುಗಿಯುವ ಹೊತ್ತಿಗೆ ಒಬ್ಬ ಇನ್ನೊಬ್ಬನನ್ನು ಇರಿದು ಕೊಲೆ ಮಾಡಿದ್ದಾನೆ. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿರುವ ಅಲಂಕಾರ ಥಿಯೇಟರ್ ನಲ್ಲಿ ಈ ಘಟನೆ ನಡೆದಿದೆ.
21 ವರ್ಷದ ರಾಕೇಶ್ ತೆಲುಗು ನಟ ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ. ಚಿತ್ರ ಪ್ರದರ್ಶನದ ಮಧ್ಯೆ ಹಾಡೊಂದು ಬಂದಾಗ ಎದ್ದು ನಿಂತು ಕುಣಿಯಲಾರಂಭಿಸಿದ. ಆಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರವಿ ಎಂಬಾತನಿಗೆ ಅಡ್ಡವಾಯಿತು. ರಾಕೇಶ್ ನನ್ನು ಕುಳಿತುಕೊಳ್ಳುವಂತೆ ರವಿ ಸೂಚಿಸಿದನು. ಆದರೆ ಅದಕ್ಕೆ ಒಪ್ಪದೆ ಡ್ಯಾನ್ಸ್ ಮುಂದುವರಿಸಿದನು. ಸಿಟ್ಟಿನಿಂದ ರವಿ ಜಗಳ ಮಾಡಲು ಆರಂಭಿಸಿದನು. ಕುಳಿತಿದ್ದ ಪ್ರೇಕ್ಷಕರಿಗೆ ತೊಂದರೆಯಾಗಿ ಅವರು ಬಯ್ಯಲು ಶುರು ಮಾಡಿದರು. ಸಿನಿಮಾ ಮುಗಿದ ಬಳಿಕವೂ ಹೊರಗೆ ಬಂದು ರವಿ ಮತ್ತು ರಾಕೇಶ್ ಜಗಳ ಮುಂದುವರಿಸಿದರು. ಸಿಟ್ಟಿನಲ್ಲಿ ರವಿ ರಾಕೇಶ್ ಗೆ ತಿವಿದು ಸ್ನೇಹಿತರ ಜೊತೆ ಪರಾರಿಯಾದನು.
ಗಂಭೀರ ಗಾಯಗೊಂಡಿದ್ದ ರಾಕೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ರಾಕೇಶ್ ನ ಕುಟುಂಬಸ್ಥರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿ ರವಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ಧಾವಿಸಿದ ತುಮಕೂರು ಪೊಲೀಸ್ ಸೂಪರಿಂಟೆಂಡೆಂಟ್ ಕಾರ್ತಿಕ್ ರೆಡ್ಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲೆತ್ನಿಸಿದರು. ಕೇಸು ದಾಖಲಿಸಿರುವ ಪಾವಗಡ ಪೊಲೀಸರು ಆರೋಪಿ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement