ಬೆಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಯ ವೈದ್ಯಕೀಯ ನೆರವು ದುರ್ಬಳಕೆ ಪ್ರಕರಣದ ಸಂಬಂಧ ಸಿಐಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಮೋಘಪ್ಪ, ತುಮಕೂರಿನ ಎಂ.ಕೆ.ಕಿರಣ್ ಹಾಗೂ ಮಂಡ್ಯದ ಸಿ.ಎಂ.ನಾಗರಾಜ್ ಶೆಟ್ಟಿ ಮತ್ತು ಶಂಕರ್ ಬಂಧಿತರು. ಆರೋಪಿಗಳಿಂದ ಹಲವು ನಕಲಿ ವೈದ್ಯಕೀಯ ದಾಖಲೆಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಶಿಫಾರಸು ಪತ್ರ ಜಪ್ತಿ ಮಾಡಲಾಗಿದೆ.
ಆರೋಪಿಗಳು ವಿವಿಧ ಆಸ್ಪತ್ರೆಗಳ ಬಿಲ್ ಹಾಗೂ ಡಿಸ್ಚಾರ್ಜ್ ಮಾಡಿರುವ ರಸೀದಿ ಪಡೆದು ಅದನ್ನು ತಂದು ಸರ್ಕಾರಕ್ಕೆ ನೀಡಿ ಸಿಎಂ ಪರಿಹಾರ ನಿಧಿಯಿಂದ ಹಣ ಪಡೆಯುತ್ತಿದ್ದರು.
ಕಲಬುರಗಿ ಜಿಲ್ಲೆಯ ತನ್ನೂರಿನ ಜನರು ಸೇರಿದಂತೆ ನೆರೆಹೊರೆ ಗ್ರಾಮಸ್ಥರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ನೆರವು ಕೊಡಿಸುವುದಾಗಿ ನಂಬಿಸಿ ಅಮೋಘಪ್ಪ ವಂಚಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಲುಬರಗಿಯ ಚಿರಾಯು, ವಾತ್ಸಲ್ಯ, ಮಹಾರಾಷ್ಟ್ರದ ಸೊಲ್ಲಾಪುರದ ಯಶೋಧರಾ, ಅಶ್ವಿನಿ ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ವೈದ್ಯಕೀಯ ಹಾಗೂ ಬಿಡುಗಡೆ ಪತ್ರಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ್ದರು ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ. ಬಂದ ಹಣದಲ್ಲಿ ಆಸ್ಪತ್ರೆಗೆ ಇಂತಿಷ್ಟು ಕಮಿಷನ್ ಹಣವನ್ನು ಅಮೋಘಪ್ಪ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement