ಬೆಂಗಳೂರು: ಯೋಧರ ವಿರುದ್ಧ ಘೋಷಣೆ ಕೂಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಆಮ್ನೆಸ್ಟಿ ಇಂಟರ್'ನ್ಯಾಷನಲ್ ಇಂಡಿಯಾ ತನ್ನ ಕಚೇರಿಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ವರದಿಯನ್ನು ಆಮ್ನೆಸ್ಟಿ ಶುಕ್ರವಾರ ತಿರಸ್ಕರಿಸಿದೆ.
ಈ ಕುರಿತಂತೆ ಮಾತನಾಡಿರುವ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆಕರ್ ಪಟೇಲ್ ಅವರು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಮ್ಮ ವಿರುದ್ಧ ದಾಖಲು ಮಾಡಿರುವ ದೇಶದ್ರೋಹ ಪ್ರಕರಣ ಸರಿಯಾದುದ್ದಲ್ಲ. ಎಫ್ಐಆರ್ ನಲ್ಲಿ ಸಾಕಷ್ಟು ವಾಸ್ತವಿಕ ದೋಷಗಳಿವೆ ಎಂದು ಹೇಳಿದ್ದಾರೆ.
ದಾಖಲು ಮಾಡಿರುವ ದೇಶದ್ರೋಹ ಪ್ರಕರಣ ತಪ್ಪಾಗಿದೆ. ನಾವು ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂಬುದನ್ನು ಇಲ್ಲಿನ ಸಾಕಷ್ಟು ನಾಗರೀಕರು ಹಾಗೂ ಸರ್ಕಾರ ಕೂಡ ಒಪ್ಪುತ್ತಿದೆ. ಕಾಶ್ಮೀರ ವಿಚಾರ ಸಂಬಂಧ ಸಾಕಷ್ಟು ವರ್ಷಗಳಿಂದಲೂ ಹೋರಾಡುತ್ತಲೇ ಬಂದಿದ್ದೇವೆ. ಕಾಶ್ಮೀರ ವಿಚಾರ ಗಂಭೀರವಾದ ವಿಚಾರವೆಂದು ತಿಳಿದಿದ್ದರೂ, ಈ ರೀತಿಯ ಒಂದು ವಿಚಾರಗಳಲ್ಲಿ ಅದು ಮರೆಯಾಗಿ ಹೋಗುತ್ತಿದೆ ಎಂದಿದ್ದಾರೆ.
ನಗರದ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆದ ವಿವಾದಿತ ಕಾರ್ಯಕ್ರಮದ ಕುರಿತಂತೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅಮ್ನೆಸ್ಟಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು, ಕಾನೂನು ಕಟ್ಟಳೆಗಳನ್ನು ಅನುಸರಿಯೇ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಕಾನೂನು ಚೌಕಟ್ಟಿನಿಂದ ಹೊರಹೋಗಿರಲಿಲ್ಲ. ಎಲ್ಲವನ್ನು ಸರಿಯಾದ ರೀತಿಯಲ್ಲಿಯೇ ಮಾಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ಅಮ್ನೆಸ್ಟಿ ಶೀಘ್ರದಲ್ಲೇ ತನ್ನ ಕಚೇರಿಯನ್ನು ಸ್ಥಗಿತಗೊಳಿಸಲಿದೆ ಎಂಬ ವರದಿಯನ್ನು ತಿರಸ್ಕರಿಸಿರುವ ಅವರು, ಸಿಬ್ಬಂದಿಗಳು ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದರು. ಆದರೆ, ಬೆದರಿಕೆ, ಪ್ರತಿಭಟನೆಗಳಿಂದಾಗಿ ಸಿಬ್ಬಂದಿಗಳು ತಮ್ಮ ಮನೆಯಿಂದಲೇ ಕೆಲಸ ಮಾಡುವಂತೆ ಸಲಹೆ ನೀಡಲಾಯಿತು ಎಂದು ತಿಳಿಸಿದರು.
ನಂತರ ಒಟ್ಟಾರೆಯಾಗಿ ವಿವಾದ ಕುರಿತಂತೆ ಸ್ಪಷ್ಟನೆ ನೀಡಿದ ಅವರು, ನ್ಯಾಯಕ್ಕಾಗಿ ನಾವು ಶೀಘ್ರದಲ್ಲೇ ಕೇಂದ್ರ ಮೊರೆ ಹೋಗಲಾಗುತ್ತದೆ. ಕಾಶ್ಮೀರ ವಿವಾದ ಕುರಿತಂತೆ ಕಳೆದ ವರ್ಷ ಪ್ರಕರಣಗೊಂಡ ವರದಿಯನ್ನು ಆಧರಿಸಿಯೇ ಕಾರ್ಯಕ್ರಮವನ್ನು ನಡೆಸಲಾಗಿತ್ತು ಎಂದು ಹೇಳಿದರು.
Advertisement