ಬೆಂಗಳೂರು: ತೀವ್ರ ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಪರಿಹಾರ ಧನ ನೀಡಲು ಮನವಿ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಈ ವೇಳೆ ಬರ ಪರಿಹಾರಕ್ಕಾಗಿ 4,656 ಕೋಟಿ ರು ಹಣ ನೀಡುವಂತೆ ಕೇಳಲು ರಾಜ್ಯ ನಿರ್ಧರಿಸಿದೆ. ಜೊತೆಗೆ ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಗುರುವಾರ ರಾತ್ರಿಯವರೆಗೂ ಪ್ರಧಾನಿ ಕಾರ್ಯಾಲಯ ಮೋದಿ ಭೇಟಿಗೆ ಸಮಯ ನಿಗದಿ ಪಡಿಸದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನೂ ಗುರುವಾರ ಸಂಜೆ ರಾಜ್ಯದ ಸಂಸದರ ಜೊತೆಗೆ ಸಭೆ ನಡೆಸಿದ ಸಿಎಂ ರಾಜ್ಯದ ಸಮಸ್ಯೆಗಳನ್ನು ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಡುವಂತಕೆ ಹೇಳಿದ್ದಾರೆ.
ರಾಜ್ಯದ 139 ತಾಲೂಕುಗಳ ಬರ ಪರಿಸ್ಥಿತಿ ಹಾಗೂ ಪ್ರವಾಹದಿಂದಾದ ನಷ್ಟಗಳ ಕುರಿತು ತಯಾರಿಸಿರುವ ವರದಿಯನ್ನು ಕೇಂದ್ರಕ್ಕೆ ರಾಜ್ಯ ಸರ್ಕಾರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. 139 ತಾಲೂಕುಗಳಲ್ಲಿ ಬರ ದಿಂದಾಗಿ 16 ಸಾವಿರ ಕೋಟಿ ನಷ್ಟವಾಗಿದೆ ಹಾಗೆಯೇ ಕೆಲವು ತಾಲೂಕುಗಳಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ 386 ಕೋಟಿ ರು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
Advertisement