ಅರ್ಕಾವತಿ ನಿವೇಶನ ಸಂತ್ರಸ್ತರಿಗೆ ಕೆಜಿ ಲೇಔಟ್'ನಲ್ಲಿ ಬದಲಿ ನಿವೇಶನ: ರಾಜ್ಯ ಸರ್ಕಾರ

ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಸಿಗದ ಸಂತ್ರಸ್ತರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲು ರಾಜ್ಯ ಸರ್ಕಾರ ಶುಕ್ರವಾರ ನಿರ್ಧಾರ ಕೈಗೊಂಡಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಸಿಗದ ಸಂತ್ರಸ್ತರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲು ರಾಜ್ಯ ಸರ್ಕಾರ ಶುಕ್ರವಾರ ನಿರ್ಧಾರ ಕೈಗೊಂಡಿದೆ.

 ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಡಿಎ ಹಾಗೂ ಬೆಂಗಳೂರು ನೀರು ಸರಬರಾಜುಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಮಾತನಾಡಿರುವ ಬಿಡಿಎ ಅಧ್ಯಕ್ಷ ಕೆ. ವೆಂಕಟೇಶ್ ಅವರು, ಅರ್ಕಾವತಿ ಬಡಲಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತರಾಗಿರುವ ಜನರು ಹಲವು ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಇದ್ದಾರೆ. ಪ್ರಾಧಿಕಾರದ ವತಿಯಿಂದ ಈ ಹಿಂದೆ ಕೆಲ ಲೋಪಗಳಾಗಿವೆ. ವಂಚನೆಗೊಳಗಾಗಿರುವ ಜನರು ಇಂದಿಗೂ ಪ್ರತೀನಿತ್ಯ ಬಿಡಿಎ ಕಚೇರಿಗೆ ಬರುತ್ತಿರುತ್ತಾರೆ. ವಂಚನೆಗೊಳಗಾಗಿರುವ ಜನರಿಯೆ ನ್ಯಾಯ ಒದಗಿಸಬೇಕಾಗಿದ್ದು, ಇದಕ್ಕಾಗಿ ಅರ್ಕಾವತಿ ಬಡಾವಣೆಯಲ್ಲಿ ಎಷ್ಟು ವಿಸ್ತೀರ್ಣದ ನಿವೇಶನ ಹಂಚಿಕೆಯಾಗಿತ್ತೋ ಅಷ್ಟೇ ವಿಸ್ತೀರ್ಣದ ನಿವೇಶನವನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 1,700 ರಿಂದ 1,800 ಅರ್ಜಿದಾರರಿಗೆ ಬದಲಿ ನಿವೇಶನವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದಲೂ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಬೇಕಿದೆ. ಅರ್ಕಾವತಿ ಬಡಾವಣೆಯಲ್ಲಿ ಜಾಗವಿಲ್ಲ. ಇದು ವಾಸ್ತವಾಂಶ. ಆದರೆ, ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶವನ್ನು ನೀಡಿದರೂ ಕೂಡ ಅಲ್ಲಿ ಸಾಕಷ್ಟು ಜಾಗವಿದೆ. ಈ ಹಿಂದೆ ಅರ್ಕಾವತಿ ಬಡಾವಣೆ ನಿವೇಶನದಲ್ಲಿ ವಂಚಿತರಾಗಿರುವ ಜನರನ್ನು ಸಾಕಷ್ಟು ಬಾರಿ ಕರೆದಿದ್ದೇವೆ. ಸಮಸ್ಯೆ ಬಗ್ಗೆ ವಿವರವಾಗಿ ಹೇಳಿದ್ದೇವೆ. ಆಯ್ಕೆಯನ್ನೂ ನೀಡಿದ್ದೇವೆ. ಮತ್ತೆ ಇದೀಗ ಅರ್ಜಿದಾರರಿಗೆ ಪತ್ರಗಳನ್ನು ಕಳುಹಿಸುತ್ತೇವೆ. ಅರ್ಕಾವತಿ ಬಡಾವಣೆಯಲ್ಲಿ 300 ಎಕರೆ ವ್ಯಾಜ್ಯದಿಂದ ಕೂಡಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಬಿಡಬ್ಲ್ಯೂಎಸ್ಎಸ್ ಬಿ ಇಂಜಿನಿಯರ್ ಮುಖ್ಯಸ್ಥ, ಈ ವರೆಗೂ ಬಿಡಿಎ 159 ಕೋಟಿ ಹಣವನ್ನು ಹೂಡಿಕೆ ಮಾಡಿದೆ. ಕಾಮಗಾರಿ ಕೆಲಸಗಳನ್ನು ಮುಂದುವರೆಸುವ ಸಲುವಾಗಿ ಉಳಿದ 359 ಕೋಟಿ ಹಣವನ್ನು ಬಿಡಬ್ಲ್ಯೂಎಸ್ಎಸ್ ಬಿಗೆ ನೀಡಲಿದೆ. ಈಗಾಗಲೇ ಚರ್ಚೆ ನಡೆಸಲಾಗಿದ್ದು. ಹಂತ ಹಂತವಾಗಿ ಹಣವನ್ನು ನೀಡಲಿದೆ. ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com