ಬೆಂಗಳೂರು: ಸಾರ್ವಜನಿಕರೆದುರೇ ವಕೀಲೆಯ ಕತ್ತು ಕೊಯ್ದು ಹತ್ಮಾಯೆ ಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ನ ಸಪ್ತಗಿರಿ ಕಲ್ಯಾಣ ಮಂಟಪ ಬಳಿ ನಡೆದಿದೆ.
ಕವಕಪುರ ಮೂಲದ ವಕೀಲೆ ಜ್ಯೋತಿ (26) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನಕಪುರ ಮೂಲದ ಜ್ಯೋತಿ ಕಾನೂನು ಪದವೀಧರೆಯಾಗಿದ್ದು, ಮಹಾಲಕ್ಷ್ಮೀ ಲೇಔಟ್ನ ಹಿರಿಯ ವಕೀಲರೊಬ್ಬರ ಬಳಿ ತರಬೇತಿ ಪಡೆಯುತ್ತಿದ್ದರು. ಅವರು ಸಂಜೆ 6.45ರ ಸುಮಾರಿಗೆ ಬಸ್ ನಿಲ್ದಾಣದಿಂದ ವಕೀಲರ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ರಾಜಾಜಿನಗರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಿದ್ದ ಜ್ಯೋತಿ, ಬೆಳಿಗ್ಗೆ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ವಾಪಸ್ ಬಸ್ಸಿನಲ್ಲಿ ಸಂಜೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ವ್ಯಕ್ತಿಯೊಬ್ಬನ ಜೊತೆ ಮಾತನಾಡುತ್ತಾ ನಿಂತಿದ್ದರು. ಮಾತನಾಡುತ್ತ ನಿಂತಿದ್ದ ವ್ಯಕ್ತಿ ಜ್ಯೋತಿ ಅವರ ಹೊಟ್ಟೆಗೆ ಏಕಾಏಕಿ ಚಾಕು ಹಾಕಿದ್ದ. ಬಳಿಕ ಅದೇ ಚಾಕುವಿನಿಂದ ಕತ್ತು ಕೊಯ್ದ ಎಂದು ಪ್ರತ್ಯಕ್ಷ ದರ್ಶಿ ರವಿ ಎಂಬುವರು ತಿಳಿಸಿದ್ದಾರೆ.
ಜ್ಯೋತಿ ಅವರ ಕಿರುಚಾಟ ಕೇಳಿದ ಸ್ಥಳೀಯರು ರಕ್ಷಣೆಗೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು. ಜ್ಯೋತಿ ಸಹೋದರಿ ಕೂಡ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯ ಪೋಷಕರು ಕನಕಪುರದಲ್ಲಿ ವಾಸವಾಗಿದ್ದಾರೆ.
Advertisement