ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕನಿಂದ ಶೂ ಹಾಕಿಸಿಕೊಳ್ಳುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶನಿವಾರ ನಡೆದ ಈ ಘಟನೆ ಭಾನುವಾರ ತೀವ್ರ ಸಂಚಲನ ಮೂಡಿಸಿತು.
ಹಿರಿಯ ನಟ ಚೇತನ್ ರಾಮ್ ಶನಿವಾರ ನಿಧನರಾಗಿದ್ದರು, ಮೈಸೂರಿನ ಅವರ ಮನೆಗೆ ತೆರಳಿ ಸಿಎಂ ಸಿದ್ದರಾಮಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮನೆಯಿಂದ ಸಿಎಂ ಹೊರಬಂದ ತಕ್ಷಣ ಅವರ ಆಪ್ತ ಸಹಾಯಕ ಸಿದ್ದರಾಮಯ್ಯ ಅವರ ಕಾಲಿಗೆ ಶೂ ತೊಡಿಸುತ್ತಿದ್ದರು, ಈ ಒಂದು ದೃಶ್ಯ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾನು ಯಾರಿಂದಲೂ ಶೂ ಲೇಸ್ ಕಟ್ಟಿಸಿಕೊಂಡಿಲ್ಲ, ನನ್ನ ಸಂಬಂಧಿಯೊಬ್ಬರು ಕೆಳಗೆ ಬಾಗಿ ನನ್ನ ಶೂ ನೋಡಿದರು ಎಂದು ಹೇಳಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅನಾವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೋ ನೋಡಿ ಹಲವರು ಟ್ಟಿಟ್ಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement