ಬೆಂಗಳೂರು: ಎಸ್ಎಸ್ಎಲ್ ಸಿ ಮೌಲ್ಯಮಾಪನದಲ್ಲಿ ಶಿಕ್ಷಕರು ಮಾಡಿರುವ ಅವಾಂತರವೊಂದು ಬೆಳಕಿಗೆ ಬಂದಿದ್ದು, ಮೌಲ್ಯಮಾಪನದಲ್ಲಿ ಶೂನ್ಯ ಪಡೆದಿದ್ದ ವಿದ್ಯಾರ್ಥಿಯೊಬ್ಬ ಮರುಮೌಲ್ಯಮಾಪನದಲ್ಲಿ 71 ಅಂಕಗಳಿಸಿರುವುದಾಗಿ ತಿಳಿದುಬಂದಿದೆ.
ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಾಗ ವಿದ್ಯಾರ್ಥಿಯೊಬ್ಬ ಗಣಿತ ವಿಷಯದಲ್ಲಿ ಶೂನ್ಯ ಅಂಕ ಪಡೆದಿದ್ದ. ಇದರಿಂದ ಗಾಬರಿಗೊಂಡಿದ್ದ ವಿದ್ಯಾರ್ಥಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ. ಮರುಮೌಲ್ಯಮಾಪನದಲ್ಲಿ ಇದೀಗ ವಿದ್ಯಾರ್ಥಿ 71 ಅಂಕ ಪಡೆದಿರುವುದು ಬಹಿರಂಗಗೊಂಡಿದೆ.
ಮೂಲಗಳು ತಿಳಿಸಿರುವ ಪ್ರಕಾರ ಮೌಲ್ಯಮಾಪನಕ್ಕಿಂತಲೂ ಮರುಮೌಲ್ಯಮಾಪನದಲ್ಲೇ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.
ಶಿಕ್ಷಣ ಇಲಾಖೆಯ ಈ ಕರ್ಮಕಾಂಡಕ್ಕೆ ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದು, ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಶಿಕ್ಷಕರು ಇಷ್ಟೊಂದು ನಿರ್ಲಕ್ಷ್ಯವಹಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಇಬಿ) ಮಾಹಿತಿ ನೀಡಿರುವ ಪ್ರಕಾರ, ಈ ವರೆಗೂ 6,500 ಅರ್ಜಿಗಳು ಮರುಮೌಲ್ಯಮಾಪನಕ್ಕೆ ಬಂದಿದ್ದು, ಇದರಲ್ಲಿ ಉತ್ತರ ಪತ್ರಿಕೆಯ ಪ್ರತಿಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆಂದು ಹೇಳಿದೆ, ಅಲ್ಲದೆ, ಮೌಲ್ಯಮಾಪನದಲ್ಲಿ 0 ಅಂಕ ಪಡೆದಿದ್ದ ವಿದ್ಯಾರ್ಥಿಯೊಬ್ಬ ಮರುಮೌಲ್ಯಮಾಪನದಲ್ಲಿ 71 ಅಂಕ ಪಡೆದಿರುವ ವಿಚಾರವನ್ನು ಬಹಿರಂಗಪಡಿಸಿದೆ.
ಶಿಕ್ಷಕರು ಮಾಡುತ್ತಿರುವ ಇಂತಹ ದೊಡ್ಡ ತಪ್ಪುಗಳು ಮಾನವ ನಿರ್ಮಿತ ತಪ್ಪುಗಳಲ್ಲ. ಇಂತಹ ತಪ್ಪುಗಳು ಅಪರಾಧಕ್ಕೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ತಪ್ಪು ಮಾಡಿದ ಮೌಲ್ಯಮಾಪಕರಿಗೆ ದಂಡ ಸಮೇತ ನೋಟಿಸ್ ನ್ನು ಜಾರಿ ಮಾಡಲಾಗಿದೆ. ಪ್ರಸ್ತುತ ಏನು ಮಾಡಬೇಕೆಂಬುದು ಗೊಂದಲ ವಿಚಾರವಾಗಿದೆ. ಆದರೆ, ಮೌಲ್ಯಮಾಪಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement