ಚಿಕ್ಕಮಗಳೂರು: 10 ಲಕ್ಷ ರುಪಾಯಿಗಾಗಿ ರೌಡಿಗಳನ್ನು ಬಿಟ್ಟು ಯುವಕನನ್ನು ಕಿಡ್ನಾಪ್ ಮಾಡಿಸಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಪಪ್ಪ ಹಂಡಿಬಾಗ್ ವಿರುದ್ಧ ಕೇಸ್ ದಾಖಲಾಗಿದ್ದು, ಆರೋಪಿ ಈಗ ತಲೆಮರೆಸಿಕೊಂಡಿದ್ದಾನೆ.
ಹಣಕ್ಕಾಗಿ ಕಲ್ಲಪ್ಪ ಹಂಡಿಬಾಗ್ ತನ್ನನ್ನು ಮಾಡಿಸಿ 10 ಲಕ್ಷ ರುಪಾಯಿ ಪಡೆದಿದ್ದಾರೆ ಎಂದು ಆರೋಪಿಸಿ ತೇಜಸ್ ಎಂಬ ಯುವಕ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಹಂಡಿಬಾಗ್ ಅವರನ್ನು ಅಮಾನತು ಮಾಡಿ ತನಿಖೆ ನಡೆಸುವಂತೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಆದೇಶ ನೀಡಿದ್ದಾರೆ.
ಏನಿದು ಘಟನೆ?
ಚಿಕ್ಕಮಗಳೂರಿನ ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಹಾಗೂ ಸ್ನೇಹಿತರು ಇಸ್ಪೀಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ತೇಜಸ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಹೊರಬಂದ ನಂತರ ಜೂನ್ 28ರಂದು ತೇಜಸ್ ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ಬಳಿಕ ಡಿವೈಎಸ್ಪಿ ಕಲ್ಲಪ್ಪ 10 ಲಕ್ಷ ರುಪಾಯಿ ಹಣ ತಲುಪಿಸುವಂತೆ ದೂರವಾಣಿ ಮೂಲಕ ಸೂಚಿಸಿದ್ದ. ಅದರಂತೆ ತೇಜಸ್ ಸ್ನೇಹಿತ ಪವನ್ 10 ಲಕ್ಷ ರುಪಾಯಿ ಹಣವನ್ನು ತಲುಪಿಸಿದ್ದ. ಹಣ ನೀಡಿದ ನಂತರ ತೇಜಸ್, ಹಂಡಿಬಾಗ್ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿದಾಗ ಈ ವಿಷಯ ಬಯಲಾಗಿದೆ.